ಪ್ರಣಬ್ ಹಿಂದೆ ನಿಂತ ಜಗನ್, ಸಂಗ್ಮಾಗೆ ತಳಮಳ

ಹೈದರಾಬಾದಿನ ಚಂಚಲಗುಡ ಜೈಲಿನಲ್ಲಿರುವ ಜಗನ್ ಅವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಹತ್ತಿರದ ಮತದಾನ ಕೇಂದ್ರದಲ್ಲಿ ಜು.19ರಂದು ಮತ ಚಲಾಯಿಸಲು ಅನುಮತಿ ನೀಡುವಂತೆ ಕೋರಲಿದ್ದಾರೆ.
ಜಗನ್ ರೆಡ್ಡಿಗೆ ಅನುಮತಿ ಸಿಕ್ಕರೆ ಇತ್ತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕೂಡಾ ಮತದಾನ ಮಾಡಲು ಅನುಮತಿ ಕೇಳಲಿದ್ದಾರೆ.
ಸಾಮಾನ್ಯವಾಗಿ ಈ ಇಬ್ಬರು ಮುಖಂಡರು ಸಂಸತ್ತಿಗೆ ಬಂದು ಮತ ಚಲಾಯಿಸಬೇಕಾಗುತ್ತದೆ. ವಿಧಾನಪರಿಷತ್ ಸದಸ್ಯರಾಗಿರುವ ಜನಾರ್ದನ ರೆಡ್ಡಿ ಹಾಗೂ ಕಡಪ ಸಂಸದ ಜಗನ್ ರೆಡ್ಡಿ ಅವರು ಕೋರ್ಟ್ ಅನುಮತಿ ನೀಡಿದರೆ ಮಾತ್ರ ಮತ ಚಲಾವಣೆ ಮಾಡಬಹುದಾಗಿದೆ.
ಯುಪಿಎ ಪರ ನಿಂತ ಜಗನ್: ಯುನೈಟೆಡ್ ಪ್ರೊಗ್ರೇಸಿವ್ ಅಲೈಯನ್ಸ್ (UPA) ಪರ ಜಗನ್ ನಿಂತಿದ್ದಾದರೂ ಏಕೆ? ಎಂಬ ಪ್ರಶ್ನೆ ಏಳುತ್ತದೆ. ಪಿಎ ಸಂಗ್ಮಾ ಅವರು ಚಂಚಲಗುಡ ಜೈಲಿಗೆ ಬಂದಾಗ ಒಳಗಡೆ ಹೋಗಲು ಆಗದಂಥ ಪರಿಸ್ಥಿತಿ ನಿರ್ಮಿಸಲಾಗಿತ್ತು. ಕೊನೆಗೆ ಜಗನ್ ಅವರ ತಾಯಿ ವಿಜಯಮ್ಮ ಅವರನ್ನು ಭೇಟಿ ಮಾಡಿ ತೆರಳಿದ್ದರು.
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರೊಂದಿಗೆ ಪ್ರಣಬ್ ಮುಖರ್ಜಿ ಅವರಿಗಿದ್ದ ಸ್ನೇಹಕ್ಕೆ ಜಗನ್ ಮನ್ನಣೆ ನೀಡಲಿದ್ದು, ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕೂಡಾ ಪ್ರಣಬ್ ಅವರಿಗೆ ಮತ ನೀಡಲಿದೆ. ಇದಲ್ಲದೆ, ಜಗನ್ ಅವರ ಭವಿಷ್ಯದ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ನಾಯಕರೊಡನೆ ವೈಎಸ್ ವಿಜಯಮ್ಮ ಮಾತುಕತೆ ನಡೆಸಿ ಬಂದ ಮೇಲೆ ಈ ರೀತಿ ಬೆಳವಣಿಗೆಗಳು ಕಾಣಿಸಿಕೊಂಡಿದೆ.
ಎನ್ ಡಿಎ ಅಭ್ಯರ್ಥಿಗೆ ಮತ ನೀಡಿದರೆ ಕಾಂಗ್ರೆಸ್ ಜೊತೆಗಿನ ಬಿರುಕು ಇನ್ನಷ್ಟು ಹೆಚ್ಚಾಗಬಹುದು. ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಪಕ್ಷ ಪ್ರಭುತ್ವಕ್ಕೆ ಬಂದರೆ ಎನ್ ಡಿಎಗಿಂತ ಕಾಂಗ್ರೆಸ್ ನೆರವು ಅಗತ್ಯವಾಗಿರುತ್ತದೆ. ಹೀಗಾಗಿ ಸಂಗ್ಮಾಗಿಂತ ಪ್ರಣಬ್ ಅವರಿಗೆ ಮತ ನೀಡುವುದೇ ಸೂಕ್ತ ಎಂಬ ಚಿಂತನೆಯಲ್ಲಿ ವೈಎಸ್ ಆರ್ ಪಕ್ಷ ತೊಡಗಿದೆ.
2014ರ ತನಕ ಮನಮೋಹನ್ ಪ್ರಧಾನಿ: ಸಮಾಜವಾದಿ ಪಕ್ಷ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿಯಾಗಿ ನೋಡಲು ಬಯಸುವುದಿಲ್ಲ ಎಂದ ಮೇಲೆ ಪ್ರಧಾನಿ ಸಿಂಗ್ ಅವರ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ಸ್ಪಷ್ಟಣೆ ನೀಡಿತ್ತು.
2014ರ ವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗೇ ಮುಂದುವರೆಯಲಿದ್ದಾರೆ ಎಂದು ಹೇಳಿತ್ತು. ಹೀಗಾಗಿ ಪ್ರಧಾನಿ ಸ್ಪರ್ಧೆ ಬಗ್ಗೆ ಇದ್ದ ಗಾಳಿಸುದ್ದಿ ಹಾಗೆ ತೂರಿಕೊಂಡು ಹೋಗಿ ಮೂಲೆ ಸೇರಿದೆ.












Click it and Unblock the Notifications