ಸದಾನಂದರ 3 ಷರತ್ತು; ನಡೆಯದ ಶಾಸಕಾಂಗ ಸಭೆ

ತಮ್ಮ ಅಧಿಕೃತ ನಿವಾಸ ಅನುಗ್ರಹದಲ್ಲಿ 50 ಶಾಸಕರ ಬೆಂಬಲದೊಂದಿಗೆ ಬಂಡಾಯ ಬಾವುಟ ಹಾರಿಸಿರುವ ಸದಾನಂದ ಗೌಡರು ವರಿಷ್ಠರ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಶಾಸಕಾಂಗ ಸಭೆಗೆ ಹಾಜರಾಗಲು ಕ್ಯಾಪಿಟಲ್ ಹೋಟೆಲಿನತ್ತ ಹೆಜ್ಜೆ ಹಾಕುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಶಾಸಕಾಂಗ ಸಭೆ ಮುಂದೂಡಿಕೆ: 'ತಮ್ಮನ್ನೇ (ಡಿವಿಎಸ್) ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಉಪ ಮುಖ್ಯಮಂತ್ರಿಯನ್ನಾಗಿ ತಮ್ಮ ಬಣದವರನ್ನೇ ನೇಮಕ ಮಾಡಬೇಕು ಮತ್ತು ಪಕ್ಷದ ಹಿತದೃಷ್ಟಿಯಿಂದ ಸಾಮಾಜಿಕ ನ್ಯಾಯಕ್ಕೆ ಪ್ರಾಧಾನ್ಯತೆ ಕಲ್ಪಿಸಬೇಕು ಎಂದು ಸದಾನಂದ ಗೌಡರು ಷರತ್ತು ಹಾಕಿದ್ದಾರೆ. ಇದು ಈಡೇರದ ಹೊರತು ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ವರಿಷ್ಠರಿಗೆ ಖುದ್ದಾಗಿ ಸದಾನಂದ ಗೌಡರು ಪತ್ರ ಬರೆದು ತಿಳಿಸಿದ್ದಾರೆ.
ಸದಾನಂದರ ರಾಜಕೀಯ ದಾಳಕ್ಕೆ ತತ್ತರಿಸಿರುವ ವರಿಷ್ಠರು ತಕ್ಷಣ ಹೋಟೆಲ್ ಅಶೋಕಾಗೆ ಬರುವಂತೆ ಸದಾನಂದರಿಗೆ ಬುಲಾವ್ ನೀಡಿದ್ದಾರೆ.
ಸದಾನಂದ ಗೌಡರ ನಿವಾಸದಲ್ಲಿ ಬಾಲಚಂದ್ರ ಜಾರಕಿಹೊಳಿ, ಬಚ್ಚೇಗೌಡ, ಗೋವಿಂದ ಕಾರಜೋಳ, ಆನಂದ್ ಅಸ್ನೋಟಿಕರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನಪ್ಪ ವಜ್ಜಲ್, ಸೋಮಲಿಂಗಪ್ಪ, ರವೀಂದ್ರನಾಥ್, ಎಂ.ಚಂದ್ರಪ, ಸೊಗಡು ಶಿವಣ್ಣ, ಸಂಪಂಗಿ, ಅಪ್ಪಚ್ಚು ರಂಜನ್, ಮಲ್ಲಿಕಾ ಪ್ರಸಾದ್, ಕೃಷ್ಣ ಜೆ. ಪಾಲೆಮಾರ್, ಅಂಗಾರ, ರಘುಪತಿ ಭಟ್, ಸಿ.ಟಿ.ರವಿ, ರಾಜು ಕಾಗೆ, ಶ್ರಿಕಾಂತ್ ಕುಲಕರ್ಣಿ, ಚರಂತಿ ಮಠ, ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣ ಶೆಟ್ಟಿ, ನೇಮಿರಾಜ ನಾಯ್ಕ, ವಿ.ಸಿ.ನಾಗೇಶ್, ಯೋಗೇಶ್ವರ್, ಕೃಷ್ಣಯ್ಯ ಶೆಟ್ಟಿ, ವಿಜಯಕುಮಾರ್, ರಾಮದಾಸ್, ಶಂಕರಲಿಂಗೇಗೌಡ, ಲಾಲಾಜಿ ಮೆಂಡನ್, ಕೆ.ಎಸ್.ಈಶ್ವರಪ್ಪ, ಧುರ್ಯೋದನ ಐಹೊಳೆ, ದೊಡ್ಡನ ಗೌಡ ಪಾಟೀಲ್, ರಮೇಶ್ ಭೂಸನೂರು, ನಾರಾಯಣ ಸ್ವಾಮಿ, ಎಸ್.ರಘು ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಹಾಗೂ ಸಚಿವರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಪಾಳಯದಲ್ಲಿ ಏನಾಗುತ್ತಿದೆ: ಇದೇ ವೇಳೆ ಉಪಮುಖ್ಯಮಂತ್ರಿ ಹುದ್ದೆ ತಮ್ಮ ಬಣಕ್ಕೇ ನೀಡಬೇಕು ಎಂಬ ಪಟ್ಟನ್ನು ಯಡಿಯೂರಪ್ಪ ಅವರು ಸಡಿಲಿಸಿಲ್ಲ. ಶೋಭಾ ಕರಂದ್ಲಾಜೆ, ರಾಜೂಗೌಡ ಮತ್ತು ರೇವೂ ನಾಯ್ಕ್ ಬೆಳಮಗಿ ಅವರಲ್ಲಿ ಒಬ್ಬರನ್ನು ಡಿಸಿಎಂ ಸ್ಥಾನದಲ್ಲಿ ಪ್ರರತಿಷ್ಠಾಪಿಸಬೇಕು ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ಷರತ್ತು ಹಾಕಿದ್ದಾರೆ.
ಈ ಮಧ್ಯೆ, ಯಡಿಯೂರಪ್ಪ ಬಣದ 71 ಶಾಸಕರು, 20 ಎಂಎಲ್ ಸಿಗಳು ಮತ್ತು 12 ಸಂಸದರು ಹೋಟೆಲ್ ಕ್ಯಾಪಿಟಲ್ ನಲ್ಲಿ ಬೀಡುಬಿಟ್ಟಿದ್ದಾರೆ.
ಈ ಎರಡೂ ಬಣಗಳ ಜಿದ್ದಾಜಿದ್ದಿಯಿಂದಾಗಿ ಕಂಗಾಲಾಗಿರುವವರು ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ಅವರಿಗೆ ಕಳೆದ ಆಗಸ್ಟ್ ತಿಂಗಳ ಕಹಿ ನೆನಪು ಕಾಡುತ್ತಿರಬಹುದು. ಮಂಗಳವಾರ ಮಟಮಟ ಮಧ್ಯಾಹ್ನ 12 ಗಂಟೆಯಲ್ಲಿ ಹೋಟೆಲ್ ಕ್ಯಾಪಿಟಲ್ ನಲ್ಲಿ ಏಕಾಂಗಿಯಾಗಿ ಕುಳಿತಿದ್ದಾರೆ.












Click it and Unblock the Notifications