ನವವಿವಾಹಿತೆ ಶವ ಹೊತ್ತು ಆತ ಪರಾರಿಯಾಗಿದ್ದೇಕೆ?
ಬಾಗೇಪಲ್ಲಿ ತಾಲೂಕು ಚೇಳೂರು ಹೋಬಳಿ ಲಕ್ಷ್ಮಿದೇವಮ್ಮ ಎಂಬುವರ ಪುತ್ರಿ ಶಿಲ್ಪಾ(20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬಾಗೇಪಲ್ಲಿ ತಾಲೂಖಿನ ಬಿಗುವಾಗೊಲ್ಲಪಲ್ಲಿ ಊರಿನ ಮುಂಜುನಾಥ ರೆಡ್ಡಿ(25) ಎಂಬುವರ ಜೊತೆ ಏಳು ತಿಂಗಳ ಹಿಂದೆಯಷ್ಟೆ ಶಿಲ್ಪಾಳ ವಿವಾಹ ನಡೆದಿತ್ತು.
ವಿವಾಹದ ನಂತರ ಇಬ್ಬರು ಬಾಗೇಪಲ್ಲಿ ಬಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಸಾಪುರದಲ್ಲಿ ನೆಲೆಸಿದ್ದರು. ಮದುವೆಯಾದಾಗಿನಿಂದ ಶಿಲ್ಪಾಳಿಗೆ ವರದಕ್ಷಿಣೆ ಹಣಕ್ಕಾಗಿ ಮಂಜುನಾಥ ರೆಡ್ಡಿ ಪೀಡಿಸುತ್ತಿದ್ದ. ಪ್ರತಿದಿನ ಜಗಳವಾಡುತ್ತಿದ್ದ ರೆಡ್ಡಿ ಸೋಮವಾರ ಕೂಡಾ ಪತ್ನಿ ಜೊತೆ ಜೋರಾಗಿ ಕಿತ್ತಾಡಿದ್ದಾನೆ. ಸಾಲದ್ದಕ್ಕೆ ಶಿಲ್ಪಾಳ ಮನೆಯವರನ್ನು ಅವಾಚ್ಯ ಶಬ್ದಗಳಿಂದ ಹೀಯಾಳಿಸಿದ್ದಾನೆ. ರೆಡ್ಡಿ ಮಾತಿಗೆ ಉತ್ತರ ನೀಡದೆ ಸುಮ್ಮನಿದ್ದ ಶಿಲ್ಪಾಳ ಮೇಲೆ ಹಲ್ಲೆ ಮಾಡಿದ್ದಾನೆ.
ಹೀಗೆ ಬೆಳ್ಳಂ ಬೆಳಗ್ಗೆ ಜಗಳವಾಡಿದ ಮಂಜುನಾಥ ರೆಡ್ಡಿ ನಂತರ ಎಂದಿನಂತೆ ಕೆಲಸಕ್ಕೆ ಹೋಗಿದ್ದಾನೆ. ಆದರೆ, ಸೂಕ್ಷ್ಮ ಮನಸ್ಸಿನ ಯುವತಿ ಶಿಲ್ಪಾ ತೀವ್ರವಾಗಿ ಮನನೊಂದು ಜೀವನ ಅಂತ್ಯಗೊಳಿಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದ್ದಾಳೆ. ಸಾಯುವ ಮುನ್ನ ತವರು ಮನೆಗೆ ಕರೆ ಮಾಡುವ ಯತ್ನ ಮಾಡಿದರೂ ನಂತರ ಬೇಡ ಎಂದು ಸುಮ್ಮನಾಗಿದ್ದಾಳೆ. ಯಾವುದೇ ಸೂಸೈಡ್ ನೋಟ್ ಬರೆದಿಡದೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಮಧ್ಯಾಹ್ನ 3 ಗಂಟೆಗೆ ಏನೋ ಕೆಲಸದ ಮೇಲೆ ಮನೆಗೆ ಬಂದ ಮಂಜುನಾಥ ರೆಡ್ಡಿಗೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಗಾಬರಿಯಾಗಿದ್ದಾನೆ. ಆದರೆ, ತನ್ನ ಮನೆಯವರನ್ನು ಕರೆಸಿಕೊಂಡು ಆಕೆ ಶವವನ್ನು ಬಾಗೇಪಲ್ಲಿಗೆ ಸಾಗಿಸಿ ಮಧ್ಯರಾತ್ರಿ 12 ಗಂಟೆಗೆ ಶವ ಸಂಸ್ಕಾರ ನಡೆಸಲು ಮುಂದಾಗಿದ್ದಾನೆ.
ಆದರೆ, ವಿಷಯ ತಿಳಿದ ಗ್ರಾಮಸ್ಥರು ಹಾಗೂ ಶಿಲ್ಪಾ ಮನೆ ಕಡೆಯವರು ಸ್ಮಶಾನದ ಕಡೆಗೆ ಧಾವಿಸಿದ್ದಾರೆ. ಜನ ಪ್ರವಾಹ ಹರಿದು ಬರುತ್ತಿರುವ ಸದ್ದು ಕಿವಿಗೆ ಬೀಳುತ್ತಿದ್ದಂತೆ ರೆಡ್ಡಿ ತನ್ನ ಪತ್ನಿ ಶವದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ.
ಬಾಗೇಪಲ್ಲಿ ತಾಲೂಕಿನ ಕಾರತೂರು ಕ್ರಾಸ್ ಬಳಿ ಪೊಲೀಸರಿಗೆ ರೆಡ್ಡಿ ಸಿಕ್ಕಿಬಿದಿದ್ದಾನೆ. ರೆಡ್ಡಿ ಕಡೆಯವರೆಲ್ಲ ಕಾಲಿಗೆ ಬುದ್ಧಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರ ಬಾಗೇಪಲ್ಲಿ ಪೊಲೀಸರು ಆರೋಪಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆತ್ಮಹತ್ಯೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಅದೇ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗುವುದು. ಶಿಲ್ಪಾ ಶವ ಪರೀಕ್ಷೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಎಂದು ಬಾಗೇಪಲ್ಲಿ ಪೊಲೀಸರು ಹೇಳಿದರು.