ರಾಮೇಶ್ವರ ಠಾಕೂರ್, ಧರಂ ವಿರುದ್ಧ ತನಿಖೆಗೆ ಅಸ್ತು
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿಯಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವುದನ್ನು ವಿರೋಧಿಸಿ ಮಾ.ಮು. ಧರಂ ಸಿಂಗ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆಯನ್ನು ಜುಲೈ 31 ಕ್ಕೆ ಮುಂದೂಡಲಾಗಿದೆ. ಅರ್ಜಿ ಮಾನ್ಯತೆ ಬಗ್ಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಪ್ರಕರಣ ವಿಚಾರಣೆಗೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿತು.
ರಾಮೇಶ್ವರ ಠಾಕೂರ್ ವಿರುದ್ಧವೂ ತನಿಖೆ: ಧರಂ ಸಿಂಗ್ ಅವರ ಆಕ್ಷೇಪಣಾ ಅರ್ಜಿಯನ್ನು ಗುರುವಾರ ವಜಾಗೊಳಿಸಿದ ಹೈಕೋರ್ಟ್ ನ್ಯಾಯಪೀಠ, ಅವರ ವಿರುದ್ಧ ತನಿಖೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.
ಇದೇ ವೇಳೆ, ಮಾಜಿ ರಾಜ್ಯಪಾಲ, ಬಿಹಾರ ಮೂಲದ ರಾಮೇಶ್ವರ ಠಾಕೂರ್ ಮತ್ತು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಆಡಳಿತಾವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, ಸರಕಾರದ ಬೊಕ್ಕಸಕ್ಕೆ 23 ಕೋಟಿ ರು. ನಷ್ಟು ನಷ್ಟವಾಗಿದೆ ಎಂದು ಆರೋಪಿಸಿ ವಕೀಲ ನಟೇಶನ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ರಾಮೇಶ್ವರ ಠಾಕೂರ್ ವಿರುದ್ಧ ತನಿಖೆ ನಡೆಸುವುದು ಲೋಕಾಯುಕ್ತ ಕೋರ್ಟಿಗೆ ಬಿಟ್ಟ ವಿಚಾರ ಎಂದು ಹೇಳಿತು.
ಪ್ರಕರಣದ ಹಿನ್ನೆಲೆ : ಪಟ್ಟಾ ಜಮೀನಿನಲ್ಲಿ ಪರವಾನಗಿ ಇಲ್ಲದವರಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತಿಲ್ಲ ಎಂಬುದು ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಆದೇಶ. ಆದರೆ, 2004ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಧರಂ ಸಿಂಗ್ ಅವರು ನಿಯಮ ಉಲ್ಲಂಘಿಸಿ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಪ್ರದೇಶದಲ್ಲಿನ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಡೆಸಿ ಅದಿರು ಸಾಗಣೆ ಮಾಡಲು ಪರವಾನಗಿ ರಹಿತರಿಗೆ ಅನುಮತಿ ನೀಡಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕೆ 23 ಕೋಟಿ ರೂ.ನಷ್ಟ ಆಗಿದೆ.
2008ರಲ್ಲಿನ ಲೋಕಾಯುಕ್ತ ಮಧ್ಯಂತರ ವರದಿಯಲ್ಲಿ ಈ ಕುರಿತು ಉಲ್ಲೇಖವಾಗಿತ್ತು. ನಂತರ 2011ರಲ್ಲಿನ ಅಂತಿಮ ವರದಿಯಲ್ಲಿ ಧರಂ ಸಿಂಗ್ ಹೆಸರನ್ನು ವರದಿಯಿಂದ ಕೈಬಿಡಲಾಗಿದೆ ಎಂದು ವಕೀಲ ನಟೇಶನ್ ಅರ್ಜಿಯಲ್ಲಿ ಆರೋಪಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಉಂಟಾದ ನಷ್ಟವನ್ನು ಧರಂ ಸಿಂಗ್ ಅವರಿಂದಲೇ ವಸೂಲಿ ಮಾಡಲು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಹೈಕೋರ್ಟ್ನ್ನು ಕೋರಲಾಗಿತ್ತು.
ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಧರಂ ಸಿಂಗ್, ತಮ್ಮ ವಿರುದ್ಧದ ಆರೋಪಗಳಿಗೆ ಸೂಕ್ತ ಸಾಕ್ಷ್ಯಧಾರಗಳಿಲ್ಲದ ಹಿನ್ನೆಲೆಯಲ್ಲಿ ವರದಿಯಲ್ಲಿ ಹೆಸರು ಬಿಡುವಂತೆ ರಾಜ್ಯಪಾಲರು ಲೋಕಾಯುಕ್ತರಿಗೆ ನಿರ್ದೇಶಿಸಿದ್ದರು. ರಾಜ್ಯ ಸಂವಿಧಾನ ಮುಖ್ಯಸ್ಥರಾಗಿರುವ ರಾಜ್ಯಪಾಲರ ಕ್ರಮವನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದ್ದರಿಂದ, ಅರ್ಜಿಯ ಮಾನ್ಯತೆ ಹೊಂದಿಲ್ಲವಾಗಿದ್ದು, ಪ್ರಕರಣ ರದ್ದು ಮಾಡುವಂತೆ ಪ್ರತಿಪಾದಿಸಿದ್ದರು.