ಕೇಂದ್ರ ಮಂತ್ರಿಮಂಡಳಕ್ಕೆ 3 ಸಚಿವರು ಬೇಕಾಗಿದ್ದಾರೆ

ಪ್ರಣಬ್ ಮುಖರ್ಜಿ ಅವರಿಂದ ಸ್ಥಾನ ತೆರವಾದ ನಂತರ ಭಾರತಕ್ಕೆ ಹೊಸ ಆರ್ಥಿಕ ಸಚಿವ, ಗೃಹ ಸಚಿವ ಹಾಗೂ ರಕ್ಷಣಾ ಖಾತೆ ಸಚಿವರು ನೇಮಕಗೊಳ್ಳಲಿದ್ದಾರೆ.
ಪ್ರಣವ್ ಮುಖರ್ಜಿ ಜೂನ್ 24ರಂದು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ. ಎರಡು ಹುದ್ದೆಯಲ್ಲಿ ಇರಲು ಸಾಧ್ಯವಿಲ್ಲ. ನಾಮಪತ್ರ ಸಲ್ಲಿಕೆಗೂ ಮುನ್ನವೇ ರಾಜೀನಾಮೆ ನೀಡಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳಿದೆ.
ಹಣಕಾಸು ಯಾರಿಗೆ?: ಒಂದು ವೇಳೆ ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾದಲ್ಲಿ, ಕೇಂದ್ರ ಸಂಪುಟದಲ್ಲಿ ಹಣಕಾಸು, ಗೃಹ ಹಾಗೂ ರಕ್ಷಣಾ ಖಾತೆಗಳಿಗೆ ಸಚಿವರು ಬದಲಾಗಲಿದ್ದಾರೆ.
ರಕ್ಷಣಾ ಸಚಿವ ಎಕೆ ಆ್ಯಂಟನಿಯವರಿಗೆ ಹಣಕಾಸು ಖಾತೆ ದೊರೆಯುವ ಸಾಧ್ಯತೆಯಿದೆ. ಆದರೆ, ಆರ್ಥಿಕ ತಜ್ಞ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡರೂ ಅಚ್ಚರಿಯೇನಿಲ್ಲ. ಗೃಹ ಸಚಿವ ಪಿ.ಚಿದಂಬರಂ ರಕ್ಷಣಾ ಸಚಿವರಾಗಿ ನೇಮಕಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಪ್ರಣವ್ ಲೋಕಸಭೆಯ ಶಾಸಕಾಂಗ ಪಕ್ಷದ ನಾಯಕನೂ ಆಗಿರುವುದರಿಂದ, ಒಂದು ವೇಳೆ ರಾಷ್ಟ್ರಪತಿಯಾದರೆ ಆ ಸ್ಥಾನವು ಚಿದಂಬರಂ ಅಥವಾ ವಿದ್ಯುತ್ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ನೀಡುವ ಸಾಧ್ಯತೆಯಿದೆ.
ಗೃಹ ಸಚಿವ ಸ್ಥಾನಕ್ಕೆ ಲಾಬಿ: ಪಿ ಚಿದಂಬರಂ ಅವರಿಂದ ತೆರವಾಗುವ ಗೃಹ ಸಚಿವ ಸ್ಥಾನಕ್ಕೆ ಈ ಬಾರಿ ಮುಸ್ಲಿಮರೊಬ್ಬರನ್ನು ನೇಮಿಸಬೇಕೆಂಬ ಕಾಂಗ್ರೆಸ್ ಹಾಗೂ ಯುಪಿಎ ಸರ್ಕಾರದಲ್ಲಿ ಅಭಿಪ್ರಾಯ ಕೇಳಿ ಬರುತ್ತಿದೆ.
ಕಾನೂನು ಹಾಗೂ ನ್ಯಾಯಾಂಗ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ಗೆ ಗೃಹ ಖಾತೆ ಏಕೆ ನೀಡಬಾರದು ಎಂದು ಕೆಲ ಹಿರಿಯ ಮುಖಂಡರು ಪ್ರಶ್ನಿಸಿದ್ದಾರೆ. ಒಂದು ವೇಳೆ ಈ ಪ್ರಸ್ತಾವನೆಗೆ ಹೈಕಮಾಂಡ್ ಒಪ್ಪಿದರೆ ಸೋನಿಯಾಜಿ ಅವರ ಆಪ್ತ ಗುಲಾಂ ಅವರಿಗೆ ಗೃಹ ಸಚಿವ ಪಟ್ಟ ಸಿಗಬಹುದು.
ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಹಾಗೂ ಕೈಗಾರಿಕೆ ಹಾಗೂ ಜವಳಿ ಸಚಿವ ಆನಂದ್ ಶರ್ಮಾರ ಖಾತೆಗಳೂ ಬದಲಾಗುವ ಸಂಭವವಿದೆ. ಒಟ್ಟಾರೆ ಯುಪಿಎ ಸರ್ಕಾರದಲ್ಲಿ ಗಮನಾರ್ಹ ಬದಲಾವಣೆಗಳು ಆಗುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications