ಒಗ್ಗೂಡಿ, ಇಲ್ಲವೇ ನಾಶ ಹೊಂದಿ: ರಾಹುಲ್ ಎಚ್ಚರ

ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸುವ ಕೆಲಸ ಮಾಡಿ, ಭಿನ್ನಮತ ಸರಿಪಡಿಸದಿದ್ದರೆ ಸರ್ವನಾಶ ಖಂಡಿತ ಎಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿ ಹೊರಟಿದ್ದಾರೆ. ಸೋಮವಾರ ಸೋನಿಯಾ ಮೇಡಂ ಜೊತೆ ಮಾತುಕತೆ ನಡೆಸಲು ದೆಹಲಿಗೆ ಬನ್ನಿ ಎಂದು ಹೆಲಿಪ್ಯಾಡ್ ಬಳಿ ನಿಂತು ಸಿದ್ದರಾಮಯ್ಯ ಅವರಿಗೆ ರಾಹುಲ್ ಕೂಗಿ ಹೇಳಿದ್ದು ಇಂದಿನ ಪ್ರಮುಖ ಘಟನೆ ಎನ್ನಬಹುದು.
ಕಾಂಗ್ರೆಸ್ ಪಕ್ಷಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ನಮ್ಮ ಪಕ್ಷವನ್ನು ಬೇರೆ ಯಾವ ಪಕ್ಷವೂ ಸೋಲಿಸಲು ಸಾಧ್ಯವಿಲ್ಲ. ದೇವೇಗೌಡರಾಗಲಿ ಅಥವಾ ಯಡಿಯೂರಪ್ಪ ಅವರಾಗಲಿ ಕಾಂಗ್ರೆಸ್ ಸೋಲಿಸಲಾರರು. ನಮ್ಮ ಸೋಲಿಗೆ ಪಕ್ಷದಲ್ಲಿನ ಆಂತರಿಕ ಕಚ್ಚಾಟವೇ ಕಾರಣ. ಒಳ ಜಗಳವನ್ನು ಬದಿಗೊತ್ತಿ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸುವುದು ಕಷ್ಟವಾಗುತ್ತದೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ವಾಣಿಜ್ಯ ನಗರಿಯಲ್ಲಿ ಯುವರಾಜ: ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ಅವರಿಗೆ ಮಧ್ಯ ಕರ್ನಾಟಕದ ವಾಣಿಜ್ಯ ನಗರಿ ಸಂಭ್ರಮದಿಂದ ಸಜ್ಜಾಗಿತ್ತು. ದಾವಣಗೆರೆಯಲ್ಲಿ ಮೂರು ಮಹತ್ವದ ಸಭೆಯಲ್ಲಿ ರಾಹುಲ್ ಪಾಲ್ಗೊಂಡರು. ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆ, ಎಐಸಿಸಿ ಹಾಗೂ ಕೆಪಿಸಿಸಿ ಸದಸ್ಯರ ಜೊತೆ ಸಭೆ ಸೇರಿ ಯುವ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಎಂಬಿಎ ಕಾಲೇಜಿನ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಹಾಗೂ ಶಾಸಕರ ಸಭೆಯ ನಂತರ ಹುಬ್ಬಳ್ಳಿಗೆ ತೆರಳಿದರು. ಇದಕ್ಕೂ ಮೊದಲು ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದ ಉದ್ಘಾಟಿಸಿದರು.
ಲಿಂಗಾಯತರನ್ನು ನಿಲರ್ಕ್ಷಿಸಿಲ್ಲ: ಕರ್ನಾಟಕದಲ್ಲಿ ಲಿಂಗಾಯತ ಪ್ರಮುಖ ಸಮುದಾಯವಾಗಿದೆ.ಈ ಸಮುದಾಯವನ್ನು ರಾಜ್ಯ ಕಾಂಗ್ರೆಸ್ ಕಡೆಗಣಿಸಲಾಗುತ್ತಿದೆ. ಆದ್ದರಿಂದಲೇ ಕಾಂಗ್ರೆಸ್ ವಿನಾಶದ ಅಂಚಿಗೆ ತಲುಪುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹುಬ್ಬಳ್ಳಿ ಮೂಲದ ಅನಿತಾ ಎಂಬ ಕಾರ್ಯಕರ್ತೆ ರಾಹುಲ್ ಗಾಂಧಿ ಅವರಿಗೆ ಕೇಳಿಕೊಂಡರು.
ಇದಕ್ಕೆ ಉತ್ತರ ನೀಡಿದ ರಾಹುಲ್, ಕಾಂಗ್ರೆಸ್ ಯಾವ ವರ್ಗವನ್ನು ಕಡೆಗಣಿಸಿಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಕೆಳ ಹಂತದ ಕಾರ್ಯಕರ್ತರು ಪಕ್ಷದಲ್ಲಿ ಶಿಸ್ತು ಪಾಲಿಸಬೇಕು. ಎಲ್ಲಾ ಹಂತದಲ್ಲೂ ಎಲ್ಲಾ ವರ್ಗದ ಕಾರ್ಯಕರ್ತರು ಒಗ್ಗೂಡಿದಾಗ ಪಕ್ಷವನ್ನು ಇನ್ನಷ್ಟೂ ಎತ್ತರಕ್ಕೆ ಬೆಳೆಸಬಹುದು ಎಂದರು.
ರಾಹುಲ್ ಗಾಂಧಿ ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಎಂ ವೀರಪ್ಪ ಮೊಯ್ಲಿ, ಕೆಎಚ್ ಮುನಿಯಪ್ಪ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಬಿಕೆ ಹರಿಪ್ರಸಾದ್, ಸಿದ್ದರಾಮಯ್ಯ, ಕೆಪಿಸಿಸಿ ಖಚಾಂಚಿ ಶಾಮನೂರು ಶಿವಶಂಕರಪ್ಪ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಮೋಟಮ್ಮ ಅವರು ಉಪಸ್ಥಿತರಿದ್ದರು.












Click it and Unblock the Notifications