ಬಿಜೆಪಿ ನಾಯಕರ ಸಂಗಮಕ್ಕೆ ಕಾರಣವಾದ ಅಪೂರ್ವ

ಯಡಿಯೂರಪ್ಪ ಅವರ ಮೊಮ್ಮಗಳು ಬಿ.ಯು. ಅಪೂರ್ವ ಹಾಗೂ ಬಿ.ಚಂದ್ರಕಾಂತ್ ಅವರ ವಿವಾಹ ಅರತಕ್ಷತೆ ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಂಗಳೂರು ವಿಹಾರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಮುಖಾಮುಖಿಯಾಗಿದ್ದು ಮೊದಲ ವಿಶೇಷತೆಯಾಗಿತ್ತು. ನಂತರ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮುಖಾಮುಖಿಯಾಗಿ ಪರಸ್ಪರ ಸಂತಸ ಹಂಚಿಕೊಂಡರು.
ಉಳಿದಂತೆ ಅರುಣ್ಜೇಟ್ಲಿ, ರಾಜನಾಥ ಸಿಂಗ್, ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪಾಲ್ಗೊಂಡಿದ್ದರು.
ಯಡಿಯೂರಪ್ಪ ಅವರು ಉಲ್ಲಾಸ, ಉತ್ಸಾಹದಿಂದ ಆಗಮಿಸುವ ಎಲ್ಲಾ ಅತಿಥಿಗಳನ್ನು ಸ್ವತಃಅ ತಾವೇ ಬರ ಮಾಡಿಕೊಂಡು ಖುಷಿಖುಷಿಯಿಂದಲೇ ವೇದಿಕೆ ಏರಿ ವಧುವರರಿಗೆ ಗಣ್ಯರ ಪರಿಚಯ ಮಾಡಿಕೊಡುತ್ತಿದ್ದರು.
ವಿಶೇಷ ಆತಿಥ್ಯ: ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಅರ್ ಅಶೋಕ್ ಹಾಗೂ ಇನ್ನಿತರ ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಕೊಠಡಿಯಲ್ಲಿ ಉತ್ತರ ಭಾರತೀಯ ಹಾಗೂ ದಕ್ಷಿಣಾತ್ಯ ಭೋಜನಶೈಲಿಯ ತಿಂಡಿ ತಿನಿಸುಗಳು ಗಣ್ಯರ ಹೊಟ್ಟೆ ಸೇರಿತು. ಕೇಂದ್ರದ ನಾಯಕರು ದಕ್ಷಿಣದ ಸಿಹಿ ತಿಂಡಿಯನ್ನು ಇಷ್ಟಪಟ್ಟು ತಿಂದಿದ್ದು ವಿಶೇಷವಾಗಿತ್ತು.
ಸಿದ್ದಗಂಗಾ ಶ್ರೀಗಳು ಉಪಸ್ಥಿತಿ: ತುಮಕೂರಿನ ಸಿದ್ದಗಂಗಾಶ್ರೀಗಳು ವಧುವರರನ್ನು ಆಶೀರ್ವದಿಸಲು ಬಂದಿದ್ದರು. ನರೇಂದ್ರ ಮೋದಿ ಅವರು ಶ್ರೀಗಳನ್ನು ಕಂಡು ಅವರ ಆಶೀರ್ವಾದ ಬೇಡಿದರು.
ರಾಜಕೀಯ ಸಮಾಗಮ: ಮದುವೆ ನೆಪದಲ್ಲಿ ಕೇಂದ್ರ ಹಾಗೂ ರಾಜ್ಯದ ನಾಯಕರು ಒಂದೆಡೆ ಸೇರಿಸಿ ಚುಟುಕು ಚರ್ಚೆ, ಸಭೆ ಮಾಡುವ ಯಡಿಯೂರಪ್ಪ ಅವರ ಉದ್ದೇಶ ಸಫಲವಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಒಂಟಿಯಲ್ಲ ಎಂಬ ಸಂದೇಶವನ್ನು ನೀಡಲು ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಿದ್ದರು ಎಂದರೆ ತಪ್ಪಾಗಲಾರದು. ಅಧಿಕಾರಕ್ಕಿಂತ ಗೆಳೆತನ ಮುಖ್ಯ ಎಂದು ಸಾರಲು ಸದಾನಂದ ಗೌಡ, ಈಶ್ವರಪ್ಪ ಅವರ ಉಪಸ್ಥಿತರಿದ್ದರು.
ಆದರೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮಾತ್ರ ಯಡಿಯೂರಪ್ಪ ಅವರ ಮೇಲಿನ ದ್ವೇಷವನ್ನು ಸರಿಯಾಗೇ ತೀರಿಸಿಕೊಂಡರು. ಮದುವೆ ಸಂಭ್ರಮದಲ್ಲಿ ಅನಂತ್ ಕುಮಾರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೇಂದ್ರ ನಾಯಕರು ಬರುವುದರಿಂದ ಅನಂತ್ ಕೂಡಾ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಬಂದ್ ಹಾಗೂ ಮದುವೆ: ಮೇ.31 ರಂದು ಮದುವೆ ಹಾಗೂ ಭಾರತ್ ಬಂದ್ ಎರಡು ಮುಹೂರ್ತವೂ ಇದ್ದಿದ್ದರಿಂದ ಕಾರ್ಯಕರ್ತರಲ್ಲಿ ಕೊಂಚ ಗೊಂದಲ ಉಂಟಾಗಿತ್ತು. ಆದರೆ, ಎರಡೂ ಕಾರ್ಯಕ್ರಮಗಳು ನಮಗೆ ಮುಖ್ಯ. ಮೊದಲು ಮದುವೆ ಮನೆಗೆ ಹೋಗಿ 11 ಗಂಟೆ ನಂತರ ರಸ್ತೆಗಿಳಿದು ಯುಪಿಎ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿ ಎಂದು ಈಶ್ವರಪ್ಪ ಅವರು ಹೇಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಬಿಟ್ಟರು.
ಮದುವೆಗೆ ಚಕ್ಕರ್ ಹಾಕಲು ಅನಂತ್ ಗೆ ಭಾರತ್ ಬಂದ್ ಕೂಡಾ ಕಾರಣವಾಯಿತು. ಮೇ.31ರಂದು ದೆಹಲಿಯಲ್ಲಿ ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಅನಂತ್ ಗೆ ಮದುವೆ ತಪ್ಪಿಸಿಕೊಳ್ಳಲು ಒಂದು ಕಾರಣ ಬೇಕಿತ್ತು. ಉಳಿದಂತೆ ಯಡಿಯೂರಪ್ಪ ಅವರ ಮೇಲಿನ ರಾಜಕೀಯ ದ್ವೇಷ ಇನ್ನೂ ಮುಂದುವರೆದಿದೆ ಎಂಬುದು ಅವರ ಈ ನಡೆಯಿಂದ ಸ್ಪಷ್ಟವಾಗಿದೆ.
ಒಟ್ಟಾರೆ, ರಾಜಕೀಯವಾಗಿ ಹಾಗೂ ಕೌಟುಂಬಿಕವಾಗಿ ಯಡಿಯೂರಪ್ಪ ಅವರು ಮದುವೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಜೂನ್ ಮೊದಲವಾರದಿಂದ ಕರ್ನಾಟಕ ಪ್ರವಾಸ ಆರಂಭಿಸುವ ಬಗ್ಗೆ ಇನ್ನೂ ಯಡಿಯೂರಪ್ಪ ಬೆಂಬಲಿಗರು ಸ್ಪಷ್ಟನೆ ಸಿಕ್ಕಿಲ್ಲ. ಕಾದು ನೋಡೋಣ..












Click it and Unblock the Notifications