ಶೋಭಾ ಕರಂದ್ಲಾಜೆ -ಅಹ್ಮದ್ ಪಟೇಲ್ ರಹಸ್ಯ ಭೇಟಿ

ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಾಜ್ಯ ರಾಜಕೀಯ ಚಿತ್ರಣದಲ್ಲಿ ಶೋಭಾ-ಅಹ್ಮದ್ ಪಟೇಲ್ ಅವರ ಬೇಟಿ ಹೊಸ ತಿರುವು ಪಡೆದುಕೊಂಡಿದೆ. ನಿನ್ನೆ ರಾಜ್ಯದ ರಾಜಧಾನಿಯಲ್ಲಿ ಯಡಿಯೂರಪ್ಪ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಾಚಾಮಗೋಚರ ಹೊಗಳುತ್ತಿದ್ದರೆ ಅತ್ತ ರಾಷ್ಟ್ರದ ರಾಜಧಾನಿಯಲ್ಲಿ ಬಿಎಸ್ವೈ ಅವರ ಅತ್ಯಾಪ್ತೆ ಎನಿಸಿರುವ ಶೋಭಾ ಅವರು ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ ಸೋನಿಯಾ ಅವರ ಅಧೀನದಲ್ಲಿರುವ ಸಿಬಿಐನಿಂದ ಬಿಎಸ್ವೈ ವಿರುದ್ಧದ ತನಿಖೆಯ ವೇಗವನ್ನು ನಿಯಂತ್ರಿಸುವಂತೆ ಸೋನಿಯಾ ಮೇಡಂಗೆ ಮನವಿ ಮಾಡಲು ಶೋಭಾ ಮೇಡಂ ಅವರು ಅಹ್ಮದ್ ಪಟೇಲ್ ಮಾರ್ಗವನ್ನು ತುಳಿದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಮತ್ತೊಂದು ವ್ಯಾಖ್ಯಾನದ ಪ್ರಕಾರ ಸಕಾಲದಲ್ಲಿ ಯಡಿಯೂರಪ್ಪ ಕೈಹಿಡಿಯದ ಬಿಜೆಪಿಗೆ ತಕ್ಕ ಪಾಠ ಕಲಿಸಲು ಬಿಎಸ್ವೈ ಬಳ ಕಾಂಗ್ರೆಸ್ ನತ್ತ ಮುಖ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಭೇಟಿ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತ ಬೆಂಗಳೂರಿನಲ್ಲಿ ಯಡಿಯೂರಪ್ಪ ಬಣ ರಾಜಕೀಯ ವಿಪ್ಲವ ಸೃಷ್ಟಿಸಿದ್ದರೆ ಅತ್ತ ಶೋಭಾ ಅವರು ಇಂದೂ ಇನ್ನೂ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ಮೊದಲು ಅವರು ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ವರಿಷ್ಠರು ಅವರನ್ನು ಶೋಭಾರನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ. ಇದರಿಂದ ಮತ್ತಷ್ಟು ನಿರಾಶರಾದ ಶೋಭಾ, ಪಟೇಲ್ ಭೇಟಿಗೆ ನಿರ್ಧರಿಸಿದರು ಎನ್ನಲಾಗಿದೆ.
ಇದೇ ವೇಳೆ, ಭಾನುವಾರದ ಭೇಟಿಯಿಂದ ಉತ್ತೇಜಿತರಾದ ಶೋಭಾ ಅವರು ಸೋಮವಾರವೂ ಪಟೇಲ್ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.












Click it and Unblock the Notifications