ಸಚಿವ ಸಂಸಾರ ಸಮೇತ ಇಟಲಿಗೆ: ಸಿಎಂ ಗರಂ
ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ತಮ್ಮ ವಿದೇಶ ಪ್ರವಾಸಗಳಿಗೆ ಬ್ರೆಕ್ ಹಾಕಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಹೀಗಿರುವಾಗ ಸಮಾಜ ಕಲ್ಯಾಣ ಸಚಿವರು ವಿದೇಶ ಪ್ರವಾಸಕ್ಕೆ ಹೋಗಿರುವದು ಸರಿಯಲ್ಲ. ಈ ನಿಟ್ಟಿನಲ್ಲಿ ಸಚಿವರ ವಿದೇಶ ಪ್ರವಾಸದ ಬಗ್ಗೆ ವಿಚಾರಿಸುವುದಾಗಿ ಸದಾನಂದ ಗೌಡರು ಹೇಳಿದರು.
ಮೊನ್ನೆ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಸದಾನಂದ ಗೌಡರು ಸಚಿವರನ್ನು ಮನದುಂಬಿ ಹೊಗಳಿದ್ದರು. 'ಸಂಪುಟದ ಅತ್ಯುತ್ತಮ ಸಚಿವ' ಎಂಬ ಬಿರುದನ್ನೂ ದಯಪಾಲಿಸಿದ್ದರು. ಆದರೆ ಇದಾಗಿ ಕೆಲವೇ ದಿನಗಳಲ್ಲಿ ನಾರಾಯಣಸ್ವಾಮಿ ತಮ್ಮ ಕರ್ತವ್ಯ ನಿಷ್ಠೆ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.
ಇನ್ನು, ಬರದ ತಾಂಡವವಾಡುತ್ತಿರುವಾಗ ವಿದೇಶ ಪ್ರವಾಸ ಒಳಿತಲ್ಲ ಎಂದು ಖುದ್ದು ಸದಾನಂದಗೌಡರೇ ತಮ್ಮ ಪೂರ್ವನಿಗದಿತ, ಅಧಿಕೃತ ಪ್ರವಾಸವನ್ನು ರದ್ದುಗೊಳಿಸಿ, ಬರಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡಿದ್ದರು.
ನಾರಾಯಣಸ್ವಾಮಿ ಉಸ್ತುವಾರಿ ಸಚಿವರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ಜಿಲ್ಲೆ ಈ ಬಾರಿಯೂ ಭೀಕರ ಬರದಿಂದ ಬಳಲುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇಂಥ ಸಮಯದಲ್ಲಿ ಸಚಿವರು ಖುದ್ದಾಗಿ ಪರಿಸ್ಥಿತಿ ನಿಭಾಯಿಸಬೇಕಿದೆ. ಆದರೆ ನಾರಾಯಣಸ್ವಾಮಿಗೆ ವಿದೇಶ ಆಪ್ಯಾಯಮಾನವಾಗಿದೆ.