ರವಿ ಬೆಳೆಗೆರೆಗೆ 35 ಲಕ್ಷ ರು ಕೋರ್ಟ್ ದಂಡ

ವಿಚಾರಣೆಯ ವೇಳೆ, ಲೇಖನದಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ರವಿ ಬೆಳಗೆರೆ ವಿಫಲರಾದ ಹಿನ್ನೆಲೆಯಲ್ಲಿ, ಮಾನಹಾನಿ ಉದ್ದೇಶದಿಂದಲೇ ಲೇಖನಗಳನ್ನು ಪ್ರಕಟಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಪೀಠ, ಅರ್ಜಿದಾರರಿಗೆ 35 ಲಕ್ಷ ರು. ಪರಿಹಾರ ನೀಡುವಂತೆ ಆದೇಶಿಸಿತು.
ಜತೆಗೆ, ತಪ್ಪು ಸುದ್ದಿ ಪ್ರಕಟಗೊಂಡಿರುವುದಕ್ಕೆ ಕ್ಷಮೆ ಕೋರಿ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಎರಡು ಬಾರಿ ಕ್ಷಮೆ ಕೋರಿ, ಸ್ಪಷ್ಟೀಕರಣ ಪ್ರಕಟಿಸಬೇಕು. ಮಾತ್ರವಲ್ಲದೇ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.
ಈ ಹಣವನ್ನು ಎರಡು ತಿಂಗಳ ಒಳಗೆ ಸಂಸ್ಥೆಗೆ ನೀಡುವಂತೆ ಕೋರ್ಟ್ ಆದೇಶಿಸಿದೆ. ದಂಡದ ಜೊತೆಗೆ ಇಲ್ಲಿಯವರೆಗಿನ ನ್ಯಾಯಾಲಯದ ವೆಚ್ಚವನ್ನೂ ಅರ್ಜಿದಾರರಿಗೆ ನೀಡುವಂತೆಯೂ ಕೋರ್ಟ್ ಆದೇಶಿಸಿದೆ. ಕಂಪನಿಯ ಪರವಾಗಿ ಹೊಳ್ಳ ಮತ್ತು ಹೊಳ್ಳ ಕಂಪನಿಯ ಬಿ.ಗಿರೀಶ್ ವಾದ ಮಂಡಿಸಿದ್ದರು.
ಖಾಸಗಿ ಟಿವಿ ಚಾನೆಲಿನಲ್ಲಿ ಪ್ರಸಾರವಾಗುತ್ತಿದ್ದ ಪ್ಲೇ ವಿನ್ ಗೇಮ್ ಶೋ ಕುರಿತು ಅವಹೇಳನಕಾರಿ ಲೇಖನ ಪ್ರಕಟಿಸಿದ್ದನ್ನು ಪ್ರಶ್ನಿಸಿ ಅಲ್ಟ್ರಾ ಎಂಟರ್ಟೇನ್ಮೆಂಟ್ ಸೊಲುಷನ್ಸ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳಾದ ಹಿರಿಯ ಪತ್ರಕರ್ತ ಡಾ. ಎಂ. ಗೌತಮ್ ಮಾಚಯ್ಯ ಮತ್ತು ಅಭಯ್ ಗಾರ್ಕ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. 35 ಲಕ್ಷ ರು. ಪರಿಹಾರ ಮೊತ್ತದಲ್ಲಿ 30 ಲಕ್ಷ ರು. ಅಭಯ್ ಗೆ ಮತ್ತು 5 ಲಕ್ಷ ರು. ಮಾಚಯ್ಯಗೆ ಸಂದಾಯವಾಗಲಿದೆ.
ಕಂಪನಿಯು 2001ನೇ ಸಾಲಿನಲ್ಲಿ ಆನ್ಲೈನ್ ಲಾಟರಿ (ಪ್ಲೇವಿನ್) ನಡೆಸುತ್ತಿತ್ತು. ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡು ಅದರ ಮಾರ್ಗಸೂಚಿ ಅನ್ವಯ ಲಾಟರಿ ವ್ಯಾಪಾರ ನಡೆಸುತ್ತಿತ್ತು. ಆದರೆ ಕಂಪನಿಯು ಕಾನೂನುಬಾಹಿರವಾಗಿ ವ್ಯಾಪಾರ ನಡೆಸುತ್ತಿದ್ದು, ಸಾರ್ವಜನಿಕರಿಗೆ ವಂಚನೆ ಮಾಡುತ್ತಿದೆ ಎಂದು ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ 2003ರ ಮಾರ್ಚ್ ಹಾಗೂ ಮೇ ತಿಂಗಳಿನಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ರೀತಿ ಪ್ರಕಟವಾದ ತಪ್ಪು ಸುದ್ದಿಯಿಂದ ತಮ್ಮ ಮಾನಕ್ಕೆ ಹಾನಿಯಾಗಿದೆ ಎಂದು ದೂರಿ ಕಂಪನಿ ಪತ್ರಿಕೆ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.












Click it and Unblock the Notifications