ಬದಲಾಯ್ತೇ ಸಮೀಕರಣ, ಯಡ್ಡಿ-ರಾಮುಲು ಒಂದಾದರೆ?

ಏನಿಲ್ಲ. ರಾಮುಲು ಯಡಿಯೂರಪ್ಪನವರನ್ನು ಸಿಕ್ಕಾಪಟ್ಟೆ ಕೊಂಡಾಡಿದ್ದಾರೆ. ಮೂರ್ಖರ ದಿನದ ಮಾರನೆಯ ದಿನ ರಾಮುಲು ಇದನ್ನು ಹೇಳಿರುವುದರಿಂದ ಜನ ಸೀರಿಯಸ್ಸಾಗಿಯೇ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ 'ಧನ್ಯೋಸ್ಮಿ' ಅಂದರಾ ಎಂಬುದು ಇನ್ನೂ ತಿಳಿದುಬಂದಿಲ್ಲ.
ಯಾವ ಯಡಿಯೂರಪ್ಪ ಅಂದರೆ ಸಿಡಿಮಿಡಿಗೊಳ್ಳುತ್ತಿದ್ದರೋ, ತನ್ನ ಅಣ್ಣನಂತಹ ಜನಾರ್ದನ ರೆಡ್ಡಿ ಜೈಲಿಗೆ ಹೋಗಲು ಅವರೇ ಕಾರಣ ಅಂದಿದ್ದರೋ, ಯಾವ ವ್ಯಕ್ತಿ ತಿನ್ನೋ ಅನ್ನವನ್ನೇ ಸಾಕ್ಷಿಯಾಗಿಸಿಕೊಂಡು ರೆಡ್ಡಿ ಸೋದರರಿಂದ ಪಕ್ಷಕ್ಕಾಗಿ ಭಿಕ್ಷೆ ಎತ್ತಿದ್ದರೋ, ಅಂತಹ ಯಡಿಯೂರಪ್ಪನನ್ನು 'ಸ್ವಾಭಿಮಾನಿ' ಶ್ರೀರಾಮುಲು ಮನಸಾರೆ ಹಾಡಿ ಹೊಗಳಿ, ಅಚ್ಚರಿ ಮೂಡಿಸಿದ್ದಾರೆ.
ಇದು ರಾಜಕೀಯ ಸಮೀಕರಣ ಬದಲಾಗುವುದರ ದಿಕ್ಸೂಚಿಯೇ? ಕಾದು ನೊಡಬೇಕು. ಅಥವಾ ರಾಮುಲು ಪೊರಪಾಟು ಬಿದ್ದು ಹೀಗೆ ಹೇಳಿದರೋ? ಒಟ್ಟಿನಲ್ಲಿ ಇಂದಲ್ಲ ನಾಳೆ ರಾಮುಲು ಕಡೆಯಿಂದ ಸ್ಪಷ್ಟೀಕರಣ ಬರುವುದು ಗ್ಯಾರಂಟಿ.
ಏನಾಯಿತೆಂದರೆ ... ಶಿಕಾರಿಪುರ ತಾಲೂಕಿನ ನಿಂಬೆಗೊಂದಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ನೂತನ ಸಮುದಾಯ ಭವನ ಹಾಗೂ ಉಚ್ಚಂಗಿ ಎಲ್ಲಮ್ಮ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮುಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಮನಾರ್ಹವೆಂದರೆ, ಈ ಸಮಾರಂಭಕ್ಕೆ ಯಡಿಯೂರಪ್ಪ ಗೈರು ಹಾಜರಾಗಿದ್ದರು. ಆದರೆ ಅವರ ಪುತ್ರ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ರಾಮುಲು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆ ಹಾಗೂ ವಿಶೇಷವಾಗಿ ಶಿಕಾರಿಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು. ಹಾಗೆಯೇ ಶಿವಮೊಗ್ಗ ಜಿಲ್ಲೆಯ ವಾಲ್ಮೀಕಿ ಸಮಾಜದ ಹಲವು ಬೇಡಿಕೆಗಳನ್ನು ಯಡಿಯೂರಪ್ಪ ಈಡೇರಿಸಿದ್ದಾರೆ ಎಂದೂ ಸಂತೋಷ ವ್ಯಕ್ತಪಡಿಸಿದರು.
ಗುಣಗಾನಕ್ಕೆ ರಾಘು ಉತ್ತರ: ರಾಮುಲು ತಮ್ಮ ಅಪ್ಪನ ಗುಣಗಾನ ಮಾಡಿದ್ದಕ್ಕೆ ಯಡಿಯೂರಪ್ಪ ಕಿರಿಯ ಪುತ್ರ ರಾಘವೇಂದ್ರ ಸಹಜವಾಗಿಯೇ ಆನಂದತುಂದಲಿತರಾದರು. 'ಕೆಲ ರಾಜಕೀಯ ನಾಯಕರು ಷಡ್ಯಂತ್ರ ನಡೆಸಿ, ನಮ್ಮ ತಂದೆ ಮತ್ತು ಶ್ರೀರಾಮುಲು ಅಧಿಕಾರ ಕಳೆದುಕೊಳ್ಳುವಂತೆ ಮಾಡಿದರು. ಇವರಿಬ್ಬರಲ್ಲೂ ಹೋರಾಟ ಮನೋಭಾವನೆ ಇರುವುದನ್ನು ಸಹಿಸಿಕೊಳ್ಳದ ಆ ನಾಯಕರಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಇವರಿಬ್ಬರೂ ಒಟ್ಟಾಗಿ ಹೋರಾಟ ರೂಪಿಸುವ ಕಾಲ ಬರಲಿದೆ' ಎಂದರು.












Click it and Unblock the Notifications