ಶೆಟ್ಟರ್ ಮುಂದಿಟ್ಟುಕೊಂಡು ಬಿಎಸ್ವೈ ಮತ್ತೊಂದು ಯುದ್ಧ

ಮಾರ್ಚ್ 21ರ ರಾಜ್ಯ ಬಜೆಟ್ಟನ್ನು ಯಾರು ಮಂಡಿಸಲಿದ್ದಾರೆ ಎಂಬ ಬಗೆಹರಿಯಲಾಗದ ಪ್ರಶ್ನೆ, ಕೆಸರಿನ ಕಮಲದ ಬಳ್ಳಿಯಂತಾಗಿ ಬಿಜೆಪಿಯನ್ನೇ ಸುತ್ತಿಕೊಂಡಿದೆ. ಬಜೆಟ್ಟನ್ನು ಡಿವಿ ಸದಾನಂದ ಗೌಡರೇ ಮಂಡಿಸುತ್ತಾರೆ ಎಂದು ಈಶ್ವರಪ್ಪ ಹೇಳಿದ್ದರೂ, ತಮ್ಮಿಂದ ಅಥವಾ ತಮ್ಮ ಬಣದವರಿಂದ ಬಜೆಟ್ ಮಂಡನೆಯಾಗಬೇಕು ಎಂದು ಹಠತೊಟ್ಟಿರುವ ಯಡಿಯೂರಪ್ಪ ಮತ್ತೆ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.
ವಿಶ್ವಸನೀಯ ಮೂಲಗಳ ಪ್ರಕಾರ, ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಎಲ್ಲ ಬೆಂಬಲಿಗ ಶಾಸಕರಿಗೆ ಕೂಡಲೆ ತಮ್ಮ ಕ್ಷೇತ್ರ ಬಿಟ್ಟು ಬೆಂಗಳೂರಿಗೆ ಬರಲು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಬಿಎಸ್ವೈ ನಿವಾಸದಲ್ಲಿ ಬಿಜೆಪಿ ಶಾಸಕರ ಮಹತ್ವದ ಸಭೆ ಭಾನುವಾರ ನಡೆಯಲಿದೆ.
ಅನೇಕ ಹಗರಣಗಳಲ್ಲಿ ಭಾಗಿಯಾಗಿರುವ ತಮಗೆ ಬಜೆಟ್ ಮಂಡಿಸಲು ಅವಕಾಶ ಸಿಗದು ಎಂದು ತಿಳಿಯುತ್ತಿದ್ದಂತೆ, ಹೊಸ ಆಟ ಶುರು ಮಾಡಿರುವ ಯಡಿಯೂರಪ್ಪ, ಹುಬ್ಬಳ್ಳಿ ಅಭಿನಂದನಾ ಸಮಾರಂಭದ ರೂವಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಅವರಿಂದ ಬಜೆಟ್ ಮಂಡನೆಯಾಗಬೇಕು ಎಂದು ಪಟ್ಟುಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಡಿವಿ ಸದಾನಂದ ಗೌಡರಿಗೆ ಈ ಅವಕಾಶ ಸಿಗಬಾರದು ಎಂಬ ಪ್ರಯತ್ನ ಅವರದು.
ಕಳೆದ ತಿಂಗಳು ನಿತೀನ್ ಗಡ್ಕರಿ ಬೆಂಗಳೂರಿಗೆ ಬಂದಂಥ ಸಂದರ್ಭದಲ್ಲಿ, ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಯುದ್ಧ ಆರಂಭಿಸಿದ್ದ ಯಡಿಯೂರಪ್ಪನವರಿಗೆ ಆರ್ಎಸ್ಎಸ್ ಮುಖಂಡರು ಕಿವಿಮಾತು ಹೇಳುವುದರ ಜೊತೆಗೆ ಕಿವಿಯನ್ನೂ ಹಿಂಡಿದ್ದರು. ಹುಬ್ಬಳ್ಳಿಯ ಅಭಿನಂದನಾ ಸಮಾರಂಭದಲ್ಲಿ ಪರೋಕ್ಷವಾಗಿ ತಮ್ಮ ಬಲವನ್ನು ಯಡಿಯೂರಪ್ಪ ಪ್ರದರ್ಶಿಸಿದ್ದರು. ಅಧಿಕಾರವನ್ನು ಮತ್ತೆ ಕೇಳುವುದಿಲ್ಲ ಎಂದು ಹೇಳುತ್ತಲೇ, ಅಧಿಕಾರಕ್ಕೆ ಮತ್ತೆ ಬರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಡಿವಿ ಸದಾನಂದ ಗೌಡರನ್ನು ಶತಾಯಗತಾಯ ಬೆಂಬಲಿಸುತ್ತಿರುವ ಈಶ್ವರಪ್ಪ, ಅನಂತ್ ಕುಮಾರ್ ಬಣ ಒಂದೆಡೆಯಾದರೆ, ಮತ್ತೊಂದೆಡೆ ಯಡಿಯೂರಪ್ಪನವರ ಪಟಾಲಂ ಹಗ್ಗ ಜಗ್ಗಾಟದಲ್ಲಿ ನಿರತವಾಗಿದೆ. ಯಾರು ಗೆದ್ದರೂ ಸೋಲು ಮಾತ್ರ ಬಿಜೆಪಿಗೇ. ಯಡಿಯೂರಪ್ಪನವರ ಹೊಸಹೊಸ ವರಸೆಗಳಿಂದ ಬೇಸತ್ತಿರುವ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಪಟ್ಟವನ್ನು ಯಡಿಯೂರಪ್ಪನವರಿಗೆ ಬಿಟ್ಟುಕೊಟ್ಟರೂ ಪರವಾಗಿಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ಉಳಿದರೆ ಸಾಕು ಎಂಬ ನಿರ್ಧಾರಕ್ಕೆ ಬಂದಂತಿದೆ. ಈ ಕುರಿತಂತೆ ಖಚಿತ ನಿರ್ಧಾರವನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿದೆ.












Click it and Unblock the Notifications