ನಿರ್ಣಾಯಕ ಯುದ್ಧಕ್ಕೆ ರಾಮನ ಪಕ್ಷ ಅಣಿ
ರಂಗಿನಾಟ ಜೋರು: ಇನ್ನೇನು ಕೆಲವೇ ಕ್ಷಣಗಳಲ್ಲಿ ಮಹತ್ವದ ಸಚಿವ ಸಂಪುಟ ಆರಂಭವಾಗಲಿದೆ. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲು ಸಂಪುಟ ಸಭೆ ನಡೆಯಲಿದೆ. ಆದರೆ ಅದು ರಣಾಂಗಣವಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.
ದೂರದಲ್ಲೇಲ್ಲೋ (ಮುಂಬೈನಲ್ಲಿ) ನಾಡಿನ ಹಾಲಿ ದೊರೆ ಕ್ಷೀಣಸ್ವರದಲ್ಲಿ ಆಲಾಪನೆ ಶುರುವಿಟ್ಟುಕೊಂಡಿದ್ದಾರೆ. 'ಅದೆಲ್ಲ ಆಗೋಕಿಲ್ಲ. ನಾನು ಖುರ್ಚಿಯಿಂದ ಇಳಿಯೊಲ್ಲ. ಮಾಜಿ ದೊರೆಯ ವಿರುದ್ಧ ಇನ್ನೂ ಬರೋಬ್ಬರಿ 8 ಕೇಸುಗಳಿವೆ' ಎಂದು ಕರಾರುವಕ್ಕಾಗಿ ಲೆಕ್ಕಾಚಾರದ ಮಾತುಗಳನ್ನು ಆಡಿದ್ದಾರೆ.
ಇಷ್ಟು ದಿನ ಮಾಜಿ ದೊರೆಯ ವಿಚಾರದಲ್ಲಿ ತುಸು ಮೆದು ಮಾತುಗಳಿಂದ ಎಲ್ಲವನ್ನೂ ಸಂಭಾಳಿಸಿಕೊಂಡು ಬರುತ್ತಿದ್ದ ಈ ಹಾಲಿ ದೊರೆ, ನಿನ್ನೆ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಸಡ್ಡು ಹೊಡೆಯುವ ಧಾಟಿಯಲ್ಲಿ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದ ಭವಿಷ್ಯದ ಬಗ್ಗೆ ಕುತೂಹಲ ಮೂಡಿಸಿದೆ.
ಆದರೆ ಮಾಜಿ ದೊರೆಯ ಕಟ್ಟರ್ ಅಭಿಮಾನಿಗಳು ಈ ಬಾರಿ ತಮ್ಮಲ್ಲಿರುವ ಅಷ್ಟೂ ಅಸ್ತ್ರಗಳನ್ನು ಝಳಪಿಸಲು ಯುದ್ಧಸನ್ನದ್ಧರಾಗಿದ್ದಾರೆ. 'ಕೋರ್ಟ್ ಉರುಳಿನಿಂದ ಪಾರಾಗಿ, ಮರುಘಳಿಗೆಯೇ ಸಿಎಂ ಖುರ್ಚಿ ನಿಮ್ಮದಾಗುತ್ತದೆ' ಎಂದು ದಿಲ್ಲಿ ದೊರೆಗಳು ಭರವಸೆ ನೀಡಿದ್ದರಲ್ಲಾ? ಅದರಂತೆ ನಡೆದುಕೊಳ್ಳಲಿ. ಮಾಜಿ ಮುಖ್ಯಮಂತ್ರಿಯೊಬ್ಬರು ಇದೇ ಸಿಎಂ ಪದವಿಗಾಗಿ ವಚನಭ್ರಷ್ಟರಾದಂತೆ ನೀವೂ ಆಗಬೇಡಿ ಎಂದು ಈಗಾಗಲೇ ಕೆಂಪು ಜಂಡಾ ಹೂಡಿದ್ದಾರೆ. ಹೈಕಮಾಂಡ್ ಬಿಳಿ ಬಾವುಟ ಹಾರಿಸುತ್ತದಾ? ಎಂಬುದು ಸದ್ಯದ ಕುತೂಹಲ. Over to Delhi high command...