ಜನಾರ್ದನ ರೆಡ್ಡಿಯ 'ಆ ದಿನಗಳು' ಎಲ್ಲಿ ಹೋದವು?

ಹಾಗಂತ, ಪಕ್ಷ ಇದೇ ಮೊದಲ ಬಾರಿ ಇಂತಹ ವಿಷಮ ಪರಿಸ್ಥಿತಿ ಎದುರಿಸುತ್ತಿದೆ ಅಂತಲ್ಲ. ಸುಮಾರು ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರುವ ಘಳಿಗೆಯಿಂದಲೇ ಪಕ್ಷ ಇಂತಹ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿತು. ಈ ಕ್ಷಣದವರೆಗೂ ಅದರಿಂದ ಹೊರಬರಲು ಪಕ್ಷಕ್ಕೆ ಸಾಧ್ಯವಾಗೇ ಇಲ್ಲ. ಅಥವಾ ಸಂಕಷ್ಟ ನಿವಾರಣೆಗಾಗಿ ಪಕ್ಷವು ವಾಮ ಮಾರ್ಗ ಹಿಡಿದಿದ್ದರಿಂದಲೇ ಅದರಿಂದ ಹೊರಬರಲು ಸಾಧ್ಯವಾಗದೇ ಆ ದುರ್ಗಂಧದಲ್ಲೇ ಬಿದ್ದು ಹೊರಳಾಡುತ್ತಿದೆ.
ಶಿಸ್ತು, ಸಂಯಮದ ಪಕ್ಷಕ್ಕೆ ಯಾವಾಗ, ಯಾವ ಮಹಾನುಭಾವ ಆಪರೇಶನ್ ಕಮಲವೆಂಬ ಮಲ ಸೇವೆ ಕೈಗೊಂಡನೋ ಅಂದಿನಿಂದಲೇ ಪಕ್ಷಕ್ಕೆ ಪಾರ್ಶ್ವವಾಯು ಬಡಿಯಿತು. ಪಕ್ಷವೀಗ ಸಂಪೂರ್ಣ ನಿತ್ರಾಣ ಸ್ಥಿತಿಗೆ ಬಂದು ತಲುಪಿದೆ. ದೈನೇಸಿ ಸ್ಥಿತಿಯಲ್ಲಿರುವ ಪಕ್ಷವನ್ನು ಕಂಡು ನಾಡಿನ ಜನ ಛೀ ಥೂ ಅನ್ನುವಂತಾಗಿದೆ.
ಆದರೆ ಇಷ್ಟೆಲ್ಲ ಅನಾಚಾರಗಳಿಗೆ ಕಾರಣೀಭೂತನಾದ ವ್ಯಕ್ತಿ ತೆಪ್ಪಗೆ ನಾಲ್ಕು ಗೋಡೆಗಳ ಮಧ್ಯೆ ಸ್ವತಃ ದೈನೇಸಿ ಜೀವನ ನಡೆಸುವಂತಾಗಿದೆ. ಶ್ರೀರಾಮಚಂದ್ರನಂತಹ ಪಕ್ಷದ ಇಂದಿನ ದುಃಸ್ಥಿಗೆ ತಾನೇ ಕಾರಣನಾದೆನಲ್ಲಾ ಎಂದು ಸೈಲೆಂಟ್ ಮೋಡ್ ನಲ್ಲಿ ಸಿಮೆಂಟ್ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಿಬಿಟ್ಟಿದ್ದಾನೆ. ರಾಜ್ಯ ರಾಜಕೀಯದಿಂದ 'ತುಂಬಾ ದೂರ' ಇದ್ದಾನೆ.
ಇಂತಿಪ್ಪ ಆಪರೇಶನ್ ಕಮಲದ ವೈದ್ಯೋ ನಾರಾಯಣ/ ರೆಸಾರ್ಟ್ ರಾಜಕೀಯದ ಸೂತ್ರಧಾರನ ಜೀವನವೇ ಸೂತ್ರ ಹರಿದ ಪಟದಂತಾಗಿದೆ. ಅಷ್ಟಕ್ಕೂ ಯಾವ 'ಯಜಮಾನ'ನನ್ನು ಕಾಪಾಡುವ ಸೋಗಿನಲ್ಲಿ ಆ ಹೋರಾಟದ ಆಟ ಶುರುವಿಟ್ಟುಕೊಂಡನೋ ಆ ಯಜಮಾನನಿಂದಾಗಿಯೇ ಪಕ್ಷದ ಮಾನ ಈಗ ಮೂರಾಬಟ್ಟೆಯಾಗಿದೆ; ಆ ಯಜಮಾನನೇ ಈಗ ಅಧಿಕಾರ ಪ್ರಾಪ್ತಿಯಾಗದ ಹೊರತು ಎದ್ದೇಳೊಲ್ಲ ಎಂದು ಪಕ್ಷದ ಅಂಗಳದಲ್ಲಿ ಟವಲ್ ಹಾಸಿಕೊಂಡು ಮಲಗಿಬಿಟ್ಟಿದ್ದಾನೆ.
ರಾಜಕೀಯದ ವ್ಯಂಗ್ಯವೆಂದರೆ, ಯಾವ ವೈದ್ಯೋ ನಾರಾಯಣ ಆಪರೇಶನ್ ಕಮಲ/ ರೆಸಾರ್ಟ್ ರಾಜಕೀಯದ ಮೂಲಕ ಆ ಯಜಮಾನನ ಅಸ್ತಿತ್ವಕ್ಕೆ ಜೀವ ತುಂಬುತ್ತಿದ್ದನೋ ಅದೇ ಸೂತ್ರಧಾರನನ್ನು ನಿಷ್ಕ್ರಿಯಗೊಳಿಸಿ, ಏಕಾಂಗಿಯಾಗಿಸಿದ ಅಪಖ್ಯಾತಿ ಈ ಯಜಮಾನನ ಹೆಗಲೇರಿದೆ. ಸ್ವತಃ ಆ ವೈದ್ಯನ ನಂಬಿಕಸ್ಥ ನಾರಾಯಣನೇ ಆ ಅಪವಾದವನ್ನು ಮೊನ್ನೆಯಷ್ಟೇ ಹೊರೆಸಿದ್ದಾನೆ. ಈ ಯಜಮಾನನ ಸಹವಾಸವೇ ಬೇಡ ಎಂದೂ ತಿದಿಯೊತ್ತಿದ್ದಾನೆ.
ಅಲ್ಲಿಗೆ ಶ್ರೀರಾಮನ ಪಕ್ಷಕ್ಕೆ ಆಪರೇಶನ್ ಕಮಲದ ಸೇವೆಯೂ ಇಲ್ಲ; ರೆಸಾರ್ಟ್ ರಾಜಕೀಯದ ಭಾಗ್ಯವೂ ಇಲ್ಲ. ಅಷ್ಟರಮಟ್ಟಿಗೆ ಪಕ್ಷ ಸ್ವಯಂ ಗುಂಡಿ ತೋಡಿಕೊಳ್ಳಲು ಹಾರೆ, ಪಿಕಾಸಿಗಳೊಂದಿಗೆ ನಿಂತಾಗಿದೆ. ಮೇಲಿನಿಂದ ಅಶ್ವಿನಿ ದೇವತೆಗಳು ತಥಾಸ್ತು ಅನ್ನಬೇಕು ಅಷ್ಟೇ.












Click it and Unblock the Notifications