ಪತ್ರಿಕೆ ಮೇಲೆ ಗೂಬೆ ಕೂರಿಸಿ ಸಾರಿ ಎಂದ ಡಿಬಿಸಿ

ಖುದ್ದಾಗಿ ಹೈಕೋರ್ಟ್ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ ಭಕ್ತವತ್ಸಲ ಮತ್ತು ನ್ಯಾ ಎಚ್.ಎಸ್. ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠದ ಎದುರು ಖುದ್ದು ಹಾಜರಾದ ಡಿ.ಬಿ. ಚಂದ್ರೇಗೌಡ ಬೇಷರತ್ ಆಗಿ ಕ್ಷಮೆ ಯಾಚಿಸಿದರು. ಅಲ್ಲದೆ ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈ ಬಿಡುವಂತೆ ಕೋರಿ ಪ್ರಮಾಣ ಪತ್ರ ಸಲ್ಲಿಸಿದರು.
ಪತ್ರಿಕೆಯ ಮೇಲೆ ಗೂಬೆ ಕೂರಿಸಿ...: 2011ರ ಅ. 18ರಂದು ಪತ್ರಿಕಾಗೋಷ್ಠಿಯಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆಯೊಂದು ತಿರುಚಿ, ತಪ್ಪಾಗಿ ಅರ್ಥೈಸಿ ವರದಿ ಮಾಡಿದೆ. ಅಂದು ರಾಜ್ಯಪಾಲರ ಕೆಲ ನಡವಳಿಕೆ ಮಾತನಾಡಿದ್ದೇನೆ ಹೊರತು, ನ್ಯಾಯಾಂಗ ಅಥವಾ ನ್ಯಾಯಾಲಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ: ಭೂಹಗರಣ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಜಾಮೀನು ನೀಡಲು ನ್ಯಾ ಸುಧೀಂದ್ರರಾವ್ ನಿರಾಕರಿಸಿದ್ದರು. ಆ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚಂದ್ರೇಗೌಡರು ನ್ಯಾ ಸುಧೀಂದ್ರರಾವ್ ವಿರುದ್ಧ ಹೇಳಿಕೆ ನೀಡಿದ್ದರು. 'ಇದು ನ್ಯಾಯಾಂಗ ನಿಂದನೆ ಆಗುತ್ತದೆಯಲ್ಲವೇ?' ಎಂದು ಪತ್ರಕರ್ತರೊಬ್ಬರು ಎಚ್ಚರಿಸುವ ದನಿಯಲ್ಲಿ ಗೌಡರನ್ನು ಪ್ರಶ್ನಿಸಿದ್ದರು. ಅದಕ್ಕೆ ಸನ್ಮಾನ್ಯ ಚಂದ್ರೇಗೌಡರು 'ನಾನು ಕೂಡ ಕಾನೂನು ಇಲಾಖೆಯ ಮಾಜಿ ಸಚಿವ. ಏನು ಹೇಳಬೇಕು ಎಂಬುದು ನನಗೆ ಗೊತ್ತಿದೆ. ಏನೇ ಬಂದರೂ ಅದನ್ನು ಎದುರಿಸಲು ಸಿದ್ಧ' ಎಂದಿದ್ದರು.
ತಮ್ಮ ವಿರುದ್ಧ ಈ ರೀತಿ ಹೇಳಿಕೆ ನೀಡುವ ಮೂಲಕ ನ್ಯಾಯಾಂಗದ ಘನತೆಗೆ ಚಂದ್ರೇಗೌಡ ಅವರು ಚ್ಯುತಿ ಉಂಟುಮಾಡಿದ್ದಾರೆ. ತಮ್ಮ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ, ಇದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ನ್ಯಾ ಸುಧೀಂದ್ರರಾವ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ನ್ಯಾಯಾಂಗ ನಿಂದನೆ (ಕ್ರಿಮಿನಲ್) ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.












Click it and Unblock the Notifications