ರಾಮುಲು ಸ್ವಾಭಿಮಾನಿ ಪಕ್ಷದ ಅಭ್ಯರ್ಥಿ ಘೋಷಣೆ
ಈಗಿನಿಂದಲೇ ಮುಂಬರುವ ವಿಧಾನಸಭೆ ಚುನಾವಣೆ ರಣತಂತ್ರ ರೂಪಿಸಲು ಪ್ರಮುಖ ಮುಖಂಡರೊಂದಿಗೆ ಅಲ್ಲಲ್ಲಿ ಭೇಟಿ, ಚರ್ಚೆ ನಡೆಸುತ್ತಿರುವ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಶ್ರೀರಾಮುಲು ತಮ್ಮ ನೇತೃತ್ವದ ಎಸ್ಕೆಪಿ ಪಕ್ಷಕ್ಕೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕೆ. ಕರಿಯಪ್ಪ ಅವರ ಹೆಸರನ್ನು ಘೋಷಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿಯಲ್ಲಿ ಮೋಸ ಹೋದವರಿಗೆ, ಹಿರಿಯ ರಾಜಕಾರಣಿಗಳಿಗೆ, ಬಡವರ ಪರವಾದವರಿಗೆ ನಮ್ಮ ಪಕ್ಷದಲ್ಲಿ ಅವಕಾಶ ದೊರೆಯಲಿದೆ. ರಾಜ್ಯದ 224 ಕ್ಷೇತ್ರಗಳಿಗೂ ಹೊಸ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ರಾಯಚೂರಿನಲ್ಲಿ ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವು ಬೇಕಾದೆವು. ನಂತರ ನಮ್ಮನ್ನು ನಿರ್ಲಕ್ಷಿಸಲಾಯಿತು. ಈಗಾಗಲೇ ಬಿಜೆಪಿ ವರ್ಚಸ್ಸು ಎಷ್ಟರಮಟ್ಟಿಗೆ ಇದೆ ಎಂಬುದು ಜನರಿಗೆ ಮನವರಿಕೆಯಾಗಿದೆ. ವಿಧಾನಸಭೆಯ ಅಧಿವೇಶನದಲ್ಲಿ ಸಚಿವರಾದ ಸವದಿ, ಸಿ.ಸಿ. ಪಾಟೀಲ, ಪಾಲೇಮಾರ ಅಶ್ಲೀಲ ಚಿತ್ರ ವೀಕ್ಷಿಸಿ ಬಿಜೆಪಿ ಸಂಸ್ಕೃತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಹೊಸ ಪಕ್ಷಕ್ಕೆ ಉತ್ತಮ ನಾಯಕತ್ವದ ಗುಣ ಹೊಂದಿರುವವರ ಅವಶ್ಯಕತೆ ಇದೆ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕೆ. ಕರಿಯಪ್ಪ ಈ ಭಾಗದಲ್ಲಿ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಮುಂದೆ ಯಾವುದೇ ಸರಕಾರ ರಚನೆ ಆಗಲಿ ಅದಕ್ಕೆ ಶ್ರೀರಾಮುಲು ಪಕ್ಷದ ಬೆಂಬಲ ಬೇಕೆ ಬೇಕು ಎಂದು ಭರವಸೆ ವ್ಯಕ್ತಪಡಿಸಿದರು.