ಜೆಡಿಎಸ್ 'ಜಯವಾಹಿನಿ' ಬಸ್ ಹತ್ತಿದ ಪೂಜಾ ಗಾಂಧಿ

ಈ ಹಿಂದೆ ಜನತಾದಳದಲ್ಲೂ ಸಾಕಷ್ಟು ಭಿನ್ನಾಭಿಪ್ರಾಯ ಗೊಂದಲಗಳಿದ್ದವು . ಆದರೆ ಎಂದಿಗೂ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ, ವ್ಯಾಪಕ ಭ್ರಷ್ಟಾಚಾರದಂತಹ ಕೃತ್ಯಗಳಲ್ಲಿ ತೊಡಗಲಿಲ್ಲ. ಆದರೆ ಬಿಜೆಪಿ ಭಿನ್ನಾಭಿಪ್ರಾಯದ ಪರಿಣಾಮವಾಗಿ ಇಂತಹ ಕುಕೃತ್ಯಗಳನ್ನು ಮಾಡುವ ಮೂಲಕ ಕರ್ನಾಟಕವನ್ನು ಅಧೋಗತಿಗೆ ತಳ್ಳಿದೆ ಎಂದು ಕಿಡಿಕಾರಿದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಜಾತ್ಯತೀತ ಜನತಾದಳದ ಎಲ್ಲಾ ನಾಯಕರು ಒಂದೇ ಬಸ್ಸಿನಲ್ಲಿ ಕುಳಿತು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಒಗ್ಗಟ್ಟಿನ ಜೊತೆಗೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈ ಯಾತ್ರೆ ಹೊರಡುವ ಮುನ್ನ ದೇವೇಗೌಡ ತಮ್ಮ ಕುಟುಂಬ ಸದಸ್ಯರು ,ಜೆಡಿಎಸ್ನ ಹಿರಿಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ,ಹವನ ನಡೆಸಿದರು. ಈ ವೇಳೆ ಚಾಮರಾಜನಗರದಿಂದ ಆರಂಭಗೊಳ್ಳಲಿರುವ 'ಜಯವಾಹಿನಿ' ಜಾಥಾಗೆ ಚಾಲನೆ ನೀಡಿ ಮಾತನಾಡಿದ ದೇವೇಗೌಡರು, ಪಕ್ಷದ ಎಲ್ಲಾ ನಾಯಕರು ಒಟ್ಟಾಗಿ ಪ್ರವಾಸ ಕೈಗೊಳ್ಳುವ ಮೂಲಕ ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿ ಜನಪರವಾದ ಸರ್ಕಾರ ರಚನೆಗೆ ಪ್ರಯತ್ನ ನಡೆಸುವುದಾಗಿ ಪ್ರಕಟಿಸಿದರು.
ಇದೇ ವೇಳೆ ಮಾತನಾಡಿದ ಚಿತ್ರನಟಿ ಪೂಜಾ ಗಾಂಧಿ ಪಕ್ಷ ಕೈಗೊಂಡಿರುವ ಯಾತ್ರೆ ತಮಗೆ ಹೊಸ ಉತ್ಸಾಹ ತಂದಿದೆ. ರಾಜ್ಯದ ಉದ್ದಗಲ ಅರಿಯಲು ಇದರಿಂದ ತಮಗೆ ಸಹಕಾರಿಯಗಲಿದ್ದು ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ಯುವ ಜನಾಂಗವನ್ನು ಪಕ್ಷಕ್ಕೆ ಸೆಳೆಯಲು ವಿಶೇಷ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ನಂತರ ಪಕ್ಷದ ಹಿರಿಯ ನಾಯಕರಾದ ಎಂ.ಸಿ.ನಾಣಯ್ಯ, ಹೆಚ್.ಡಿ.ರೇವಣ್ಣ,ಪಿ.ಜಿ.ಆರ್.ಸಿಂಧ್ಯಾ , ಬಸನಗೌಡಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮುಖಂಡರು ಜಯವಾಹಿನಿ ರಥಯಾತ್ರೆ ಆರಂಭಿಸಿದರು. ಜಯವಾಹಿನಿ ಯಾತ್ರೆ ಇಂದು ಕೆಂಗೇರಿ,ಬಿಡದಿ ,ರಾಮನಗರ,ಚನ್ನಪಟ್ಟಣ,ಮದ್ದೂರು, ಮಳವಳ್ಳಿ,ಕೊಳ್ಳೇಗಾಲ ಮೂಲಕ ಸಾಗಿ ಚಾಮರಾಜನಗರದ ಹನೂರಿನಲ್ಲಿ ಮಧ್ಯಾಹ್ನ ಮೊದಲ ಸಮಾವೇಶ ನಡೆಸಲಿದೆ. (ಒನ್ಇಂಡಿಯಾ ಕನ್ನಡ)












Click it and Unblock the Notifications