ಸಂಪುಟದಲ್ಲಿ ನನಗೇ ಟಿಕೆಟ್ಟಾ?:ಸದಾನಂದಗೌಡ ವಿಸ್ಫೋಟ
ಮುಖ್ಯವಾಗಿ, ಪಕ್ಷ ಹಾಗೂ ಸರ್ಕಾರದ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸಂಘ ಪರಿವಾರದ ಮುಖಂಡರು ತಾಕೀತು ಮಾಡಿದ್ದರು. ಆದರೆ ಯಡಿಯೂರಪ್ಪ ಆದಿಯಾಗಿ ಅವರ ಕಟ್ಟಾಳುಗಳೂ ಅದನ್ನು ಉಲ್ಲಂಘಿಸುತ್ತಿರುವುದರಿಂದ ಆಡಳಿತಾರೂಢ ಬಿಜೆಪಿಯಲ್ಲಿ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದೇನು?: ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಯಡಿಯೂರಪ್ಪಗೆ ಸುಮಾರು ಎರಡು ಗಂಟೆ ಕಾಲ ಕಾಯುವಂತೆ ಮಾಡಲಾಗಿತ್ತು. ಅಲ್ಲದೆ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸದಾನಂದರ ಸಮ್ಮುಖದಲ್ಲಿ ಯಡಿಯೂರಪ್ಪ ಅವರನ್ನು ವಾಚಾಮಗೋಚರವಾಗಿ ಹಾಡಿಹೊಗಳಿದರು.
ಅಷ್ಟೇ ಸಾಲದು ಅಂತ, ಮತ್ತೆ ಬಿ ಎಸ್ ವೈ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದೂ ಹೇಳಿದರು. ಇದರ ಬಗ್ಗೆ ಸದಾನಂದಗೌಡ ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಗುರುವಾರ ತುಮಕೂರಿನಲ್ಲಿ ಶಾಸಕ ಸುರೇಶ್ಗೌಡ ಅಧ್ಯಕ್ಷತೆಯಲ್ಲಿ ನಡೆದ ಬೃಹತ್ ಸಮಾರಂಭಕ್ಕೆ ಉದ್ದೇಶಪೂರ್ವಕವಾಗಿಯೇ ಗೈರು ಹಾಜರಾದರು ಎನ್ನಲಾಗಿದೆ.
ಅಲ್ಲದೆ, ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸದಾನಂದಗೌಡರು, 'ನನ್ನ ಸಂಪುಟದಲ್ಲಿರುವ ಸಚಿವರು ನನ್ನ ವಿರುದ್ಧ ಪರೋಕ್ಷವಾಗಿ ಮಾತನಾಡುವುದು ಎಷ್ಟು ಸಮಂಜಸ' ಎಂದು ಸಚಿವರಾದ ಮುರುಗೇಶ್ ನಿರಾಣಿ, ರೇಣುಕಾಚಾರ್ಯ ಮತ್ತಿತರರ ವಿರುದ್ಧ ತೀವ್ರವಾಗಿ ಹರಿಹಾಯ್ದದ್ದೂ ಅಲ್ಲದೆ, 'ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಕೇವಲ ಯಾರೊಬ್ಬರದೇ ಕೊಡುಗೆಯಿಲ್ಲ. ಎಲ್ಲರ ಕೊಡುಗೆ, ಶ್ರಮ ಇದೆ...' ಎಂದು ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೇ ವಾಗ್ಧಾಳಿ ನಡೆಸಿದರು ಎಂದು ತಿಳಿದು ಬಂದಿದೆ.