ಹನಿಮೂನ್ ತಪ್ಪಿಸಿದ ಪಾಪಕ್ಕೆ 22 ಸಾವಿರ ರೂ ದಂಡ!
ಏನಾಯಿತೆಂದರೆ, ಆ ದಂಪತಿ ಮಧುಚಂದ್ರಕ್ಕೆಂದು ಕೇರಳಕ್ಕೆ ಹೊರಟು ನಿಂತಿದ್ದರು. ಅದಕ್ಕಾಗಿ ವಿಮಾನ ಪ್ರಯಾಣ ಬುಕ್ಕಿಗ್ ಸಹ ನಿಗದಿಯಾಗಿತ್ತು. ಸರಿ ಮನೆಯಿಂದ ವಿಮಾನ ನಿಲ್ದಾಣಕ್ಕೆ ಮೇರು ಕ್ಯಾಬ್ ನಲ್ಲಿ ಹೊರಟರು. ನಿಗದಿತ ಸಮಯಕ್ಕೆ ನಿಲ್ದಾಣ ತಲುಪಿಕೊಂಡರು. ಕಾರಿನಿಂದ ಇಳಿದವರೆ ಹನಿಮೂನ್ ಮೂಡಿನಲ್ಲಿ ಲಗೇಜು ಮರೆತು ವಿಮಾನದತ್ತ ಸಾಗಿದರು. ಇತ್ತ ಲಗೇಜು ಕಾರಿನಲ್ಲೇ ಉಳಿದಿತ್ತು.
ನಿಲ್ದಾಣದೊಳಕ್ಕೆ ಹೆಜ್ಜೆಯಿಡುತ್ತಿದ್ದಂತೆ ದಂಪತಿಗೆ ಏನೋ ಕಳೆದುಕೊಂಡ ಅನುಭವವಾಗಿದೆ. ತಕ್ಷಣ ಮೊಬೈಲಿನಲ್ಲಿ ಮೇರು ಕ್ಯಾಬ್ ಸರ್ವಿಸ್ ಚಾಲಕನನ್ನು ಸಂಪರ್ಕಿಸಿದ್ದಾರೆ. ಆದರೆ ಅತ್ತ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಸರಿ ಏನು ಮಾಡೋದು? ದಂಪತಿ ಹಿಂತಿರುಗಿ ಬರುವ ಮನಸ್ಥಿತಿಯಲ್ಲಂತೂ ಇರಲಲ್ಲ. ಹೀಗಾಗಿ ಮತ್ತಷ್ಟು ದುಡ್ಡು ತೆತ್ತು ಬೇರೊಂದು ವಿಮಾನ ಹಿಡಿದು ಕೊಚ್ಚಿ ತಲುಪಿಕೊಂಡರು.
ಅಲ್ಲಿಂದ ವಾಪಸಾದ ದಂ'ಪತಿ' ಅಮೃತ್ ವರ್ತಕ್, ಮೇರು ಕ್ಯಾಬ್ ಸರ್ವಿಸ್ ಗೆ ನೋಟಿಸ್ ನೀಡಿದರು. ಅವರು ಇದಕ್ಕೆ ಕ್ಯಾರೆ ಅನ್ನದಿದ್ದಾಗ ಅಮೃತ್, ಸೀದಾ ಗ್ರಾಹಕ ನ್ಯಾಯಾಲಯಕ್ಕೆ ಅಲವತ್ತುಕೊಂಡರು.
' ಸೇವಾ ಕ್ಷೇತ್ರದಲ್ಲಿರುವ ಸಂಸ್ಥೆಯೊಂದು 21ನೇ ಶತಮಾನದಲ್ಲಿ ಇಷ್ಟೊಂದು ನಿರ್ಲಕ್ಷ್ಯ ತಾಳಿದ್ದು ಅಕ್ಷಮ್ಯ. ದಂಪತಿ ನಿಜಕ್ಕೂ ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಸೋ, ಬೇರೊಂದು ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ಅದಕ್ಕೆ ತಗುಲಿದ ವೆಚ್ಚವನ್ನು (22 ಸಾವಿರ ರು) ತುಂಬಿಕೊಡುವಂತೆ' ಮೇರು ಕ್ಯಾಬ್ ಸರ್ವಿಸ್ ಗೆ ಕೋರ್ಟ್ ನಿರ್ದೇಶಿಸಿದೆ.