ಕುಲಗೆಟ್ಟು, ಬಂಡಿ ಕಳಚಿಕೊಂಡ ರೋಣದ ಬಿಜೆಪಿ ಶಾಸಕ

ಮೇಲ್ಮನೆಗೆ ನಡೆಯುವ ಮತದಾನ ಗೌಪ್ಯವಾಗಿರುತ್ತದೆ. ಅಂದರೆ ಫಾರ್ ಎ ಚೇಂಜ್ ಇಲ್ಲಿ ಸ್ವತಃ ಮತದಾರ ಆಗುವ ಶಾಸಕ ಪ್ರಭೃತಿಗಳು ತಮ್ಮ ಮತದಾನದ ಗೌಪ್ಯತೆ ಕಾಪಾಡಿಕೊಳ್ಳುವುದು ಅನಿವಾರ್ಯ. ಆದರೆ ಅದ್ಯಾವ ಅವಸರಕ್ಕೆ ಬಿದ್ದರೋ ಕಳಕಪ್ಪ ಬಂಡಿ ಬೆಳಗ್ಗೆ 10 ವೇಳೆಯಲ್ಲಿ ಮತಚಲಾಯಿಸಿದವರೇ ಅಲ್ಲೇ ಇದ್ದ ತಮ್ಮ ಮಹಾಪ್ರಭುವಿಗೆ (ಸದಾನಂದ ಗೌಡರಿಗೆ) ಪಿಂಕ್ ಬ್ಯಾಲೆಟ್ ಪೇಪರ್ ಅನ್ನು ಎತ್ತಿ ತೋರಿಸಿಯೇ ಬಿಟ್ಟರು. ಅಲ್ಲಿಗೆ ಬಂಡಿ ಕಳಚಿತು.
ಸ್ಥಳದಲ್ಲೇ ಇದ್ದ ಮತಾಧಿಕಾರಿಗಳು ಸಮಾಲೋಚನೆಯ ಬಳಿಕ ರೋಣದ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಮತದಾನವನ್ನು ಅಸಿಂಧು ಎಂದು ಘೋಷಿಸಿಯೇ ಬಿಟ್ಟರು. ಆದರೆ ಅಲ್ಲೇ ಇದ್ದ ಆಡಳಿತಾರೂಢ ಶಾಸಕರು, ಇರ್ಲಿ ಬಿಡು. ಒಬ್ಬ ಶಾಸಕನ ಮತ ಅಸಿಂಧುವಾಗಿದ್ದರಿಂದ ಆಕಾಶವೇನೂ ಕಳಚಿಬೀಳದು' ಎಂದು ಬಂಡಿಯನ್ನು ಹೊರಕ್ಕೆ ಎಳೆದು ತಂದು, ಸಮಾಧಾನಪಡಿಸಿದರು.
ಅಂದಹಾಗೆ, ಇದುವರೆಗಿನ (ಗಂಟೆ 12.30) ಮತದಾನದ ವಿವರ ಹೀಗಿದೆ: ಕಾಂಗ್ರೆಸ್ಸಿನ 65 ಶಾಸಕರಿಂದ ಮತ ಚಲಾವಣೆ. ಇನ್ನು ಬಿಜೆಪಿಯ 120 ಮಂದಿಯಿಂದ ಭರ್ಜರಿ ಮತ ಚಲಾವಣೆ. ಆದರೆ ಜೆಡಿಎಸ್ ನ ಯಾವೊಬ್ಬ ಶಾಸಕರೂ ವಿಧಾನಸೌಧದತ್ತ ತಲೆ ಹಾಕಿಲ್ಲ.
ಫಲಿತಾಂಶ ಸಂಜೆ 6 ಗಂಟೆಯ ವೇಳೆಗೆ ಬಹಿರಂಗ. ಆದರೂ ಈಗಿನ ವಿದ್ಯಮಾನಗಳನ್ನು ನೋಡಿದರೆ ಸದಾನಂದ ಗೌಡರಿಗೆ ಮುಖ್ಯಮಂತ್ರಿ ಸ್ಥಾನ ಸುಭದ್ರವಾಗಿದೆ ಎನ್ನಬಹುದು.
ಪಕ್ಷಗಳ ಸಂಖ್ಯಾಬಲ
ಬಿಜೆಪಿ- 120 (ಸ್ಪೀಕರ್ ಸೇರಿ)
ಕಾಂಗ್ರೆಸ್- 71
ಜೆಡಿಎಸ್- 26
ಪಕ್ಷೇತರರು- 07
ನಾಮನಿರ್ದೇಶಿತ- 01
ಒಟ್ಟು- 225












Click it and Unblock the Notifications