17 ಬಿಜೆಪಿ ಸಂಸದರಿಂದ ಯಡಿಯೂರಪ್ಪ ಭಜನೆ

ಯಡಿಯೂರಪ್ಪ ಭಜನೆ ಮಾಡುತ್ತಿರುವ ಕರ್ನಾಟಕದ 17 ಬಿಜೆಪಿ ಸಂಸದರು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರನ್ನು ಗುರುವಾರ ಬೆಳಿಗ್ಗೆ ಭೇಟಿ ಮಾಡಿ ಯಡಿಯೂರಪ್ಪ ಅವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಿ ಮನವಿ ಪತ್ರ ಕೊಟ್ಟಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಪ್ರಸ್ತಾಪವಾದಾಗ ಬಹಿರಂಗವಾಗಿಯೇ ಯಡಿಯೂರಪ್ಪನವರ ಮೇಲೆ ರಥಯಾತ್ರೆಯ ಸಮಯದಲ್ಲಿ ಕೆಂಗಣ್ಣು ಬೀರಿದ್ದ ಎಲ್ ಕೆ ಅಡ್ವಾಣಿಯವರ ಮೇಲೆಯೇ ತಮ್ಮ ಬೆಂಬಲಿತ ಸಂಸತ್ ಸದಸ್ಯರ ಮುಖಾಂತರ ಒತ್ತಡ ಹೇರಲು ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಕಳೆದ ಜುಲೈನಲ್ಲಿ ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ, ಮರುದಿನ ಅನೌಪಚಾರಿಕವಾಗಿ ಮಾತನಾಡುತ್ತಿದ್ದಾಗ, 'ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೀನ್ರಿ' ಎಂದು ಯಡಿಯೂರಪ್ಪ ಅಬ್ಬರಿಸಿದ್ದರು. ಅದಾಗಿ ಈಗ ಐದು ತಿಂಗಳು ಕಳೆದಿದೆ. ಈಗ ಸಂಸದರಿಂದ ಪತ್ರ ವ್ಯವಹಾರ ನಡೆಸಿ, ರಾಜ್ಯದ ನಾಯಕರಲ್ಲಿ ಚಳಿಗಾಲದಲ್ಲಿಯೂ ಬೆವರಿಳಿಯುವಂತೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಕೂಡ, ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಮುಖ್ಯಮಂತ್ರಿ ಡಿವಿ ಸದಾನಂದಗೌಡ ಮುಂತಾದವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು, ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡಿದರೆ ವಿರೋಧ ಪಕ್ಷಗಳನ್ನು ಮಟ್ಟ ಹಾಕುತ್ತೇನೆ, ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ ಎಂದು ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದರು. ಡಿ.22ಕ್ಕೆ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯಲಿದೆ. ಇಂಥ ಸಂದರ್ಭದಲ್ಲಿ ಯಡಿಯೂರಪ್ಪನವರ ಈ ತಂತ್ರಗಾರಿಕೆ ಬಿಜೆಪಿಗೆ ಬಿಸಿತುಪ್ಪವಾದರೂ ಆಶ್ಚರ್ಯವಿಲ್ಲ.











Click it and Unblock the Notifications