ರಾಮುಲುಗೆ ಗೆಲುವು, ಬಿಜೆಪಿ ಸರ್ಕಾರ ಭವಿಷ್ಯ ಏನು?

* ಜನಾರ್ದನ ರೆಡ್ಡಿ ಜೈಲಿನಿಂದ ಹೊರಕ್ಕೆ ಬರುವ ತನಕ ಯಾವುದೇ ಹೆಚ್ಚಿನ ರಾಜಕೀಯ ಸ್ಥಿತ್ಯಂತರ ಸಾಧ್ಯವಿಲ್ಲ. ಶ್ರೀರಾಮುಲು ಅವರ ಹೊಸ ಪಕ್ಷ ಸ್ಥಾಪನೆ ವಿಳಂಬ ಸಾಧ್ಯತೆ.
* ಬಿಜೆಪಿಗೆ ಬಳ್ಳಾರಿ ಬಾಗಿಲು ಮುಚ್ಚಿದ್ದು, ಶೂನ್ಯದಿಂದ ಪಕ್ಷವನ್ನು ಮತ್ತೆ ಕಟ್ಟಬೇಕಾಗುತ್ತದೆ.
* ಶ್ರೀರಾಮುಲು ಅವರ ಗೆಲುವಿನಿಂದ ಬಿಜೆಪಿ ಸರ್ಕಾರಕ್ಕೆ ತೊಂದರೆ ಆಗುವುದಿಲ್ಲ.
* ಆದರೆ, ಬಿಜೆಪಿ ನಾಯಕರ ಆಂತರಿಕ ಜಗಳ ಹೆಚ್ಚಾಗಲಿದೆ. ಸಾಮೂಹಿಕ ನಾಯಕತ್ವ ವೈಫಲ್ಯತೆ ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಮುಂದಿನ ಎಲ್ಲಾ ಚುನಾವಣೆಯಲ್ಲೂ ಇದೇ ರೀತಿ ಫಲಿತಾಂಶ ನಿರೀಕ್ಷಿತ
* ಬಳ್ಳಾರಿಯಲ್ಲಿ ಬಿಜೆಪಿಯ ನಾಲ್ವರು ಶಾಸಕರು, ಇಬ್ಬರು ಸಂಸದರ ಅಮಾನತು ಮಾಡಿದ್ದು ಬಿಜೆಪಿಗೆ ಮುಳುವಾಗಲಿದೆ.
* ಶ್ರೀರಾಮುಲು ಹೊಸ ಪಕ್ಷಕ್ಕೆ ಬಳ್ಳಾರಿ ಬಿಜೆಪಿಯ 40ಕ್ಕೂ ಹೆಚ್ಚು ನಾಯಕರು ಹೋದರೆ ಮಾತ್ರ ಸರ್ಕಾರ ಪತನಕ್ಕೆ ನಾಂದಿ ಹಾಡಿದಂತೆ ಆಗುತ್ತದೆ.
* ಆದರೆ, ಸರ್ಕಾರ ಉರುಳಿಸಿ, ಮಧ್ಯಂತರ ಚುನಾವಣೆ ಎದುರಿಸಲು ರೆಡ್ಡಿ ಸೋದರರು ಸೇರಿದಂತೆ ವಿಪಕ್ಷಗಳು ಸಿದ್ಧವಿಲ್ಲದ ಕಾರಣ ಸರ್ಕಾರ ಉಳಿಯುವ ಸಾಧ್ಯವಿದೆ.
ಸಿಬಿಐ ತನಿಖೆ: ಬಳ್ಳಾರಿಯ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಗಾಲಿ ಜನಾರ್ದನ ರೆಡ್ಡಿ ಹಾಗೂ ಬೆಂಬಲಿಗರ ವಿರುದ್ಧ ಕರ್ನಾಟಕ ಸರ್ಕಾರ ಲೋಕಾಯುಕ್ತ ವರದಿ ಆಧಾರದ ಮೇಲೆ ಸಿಬಿಐ ತನಿಖೆಗೆ ಆಗ್ರಹಿಸುವ ಸಾಧ್ಯತೆ ಕಮ್ಮಿ. ವರದಿ ಪರಿಶೀಲಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರಾಕರಿಸುವ ಸಾಧ್ಯತೆ ಹೆಚ್ಚು. ಅಲ್ಲದೆ, ರೆಡ್ಡಿಗಳ ಜೊತೆ ಸಹ ಆರೋಪಿ ಯಡಿಯೂರಪ್ಪ ಅವರ ಭವಿಷ್ಯವೂ ಅಡಗಿರುವುದರಿಂದ ಸರ್ಕಾರ ಆತುರದ ನಿರ್ಧಾ ಕೈಗೊಳ್ಳುವ ಸಾಧ್ಯತೆ ಬಹುತೇಕ ಕಮ್ಮಿ.
ಗಾಲಿ ಜನಾರ್ದನ ರೆಡ್ಡಿ ಹಾಗೂ ಬೆಂಬಲಿಗರ ವಿರುದ್ಧ ಈಗಾಗಲೆ ಬೆಂಗಳೂರಿನ ಸಿಬಿಐ ತಂಡ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇನ್ನೊಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದ ಸಿಬಿಐ ತನಿಖೆ ಜಾರಿಯಲ್ಲಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿ ಜೈಲುವಾಸ ಅನುಭವಿಸುತ್ತಿದ್ದಾರೆ.
ರೆಡ್ಡಿ ಸೋದರರು ಹಾಗೂ ಬೆಂಬಲಿಗರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಬಗ್ಗೆ ತನಿಖೆಗೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಲೋಕಾಯುಕ್ತ ವರದಿಯಲ್ಲಾಗಲಿ, ವಾರ್ಷಿಕ ಆಸ್ತಿ ಗಳಿಕೆ ವಿವರ ಸಲ್ಲಿಕೆಯಲ್ಲಾಗಲಿ ಶ್ರೀರಾಮುಲು ಅವರು ಹೆಸರು ಕೆಡಿಸಿಕೊಳ್ಳದ ಕಾರಣ ಸರ್ಕಾರಕ್ಕೆ ಮುಖಭಂಗ ಖಾತ್ರಿ ಎನ್ನಲಾಗಿದೆ.












Click it and Unblock the Notifications