ಹಣ್ಣು ತಿಂದವರು ಎಸ್ಕೇಪ್, ಸಿಪ್ಪೆ ತಿಂದವರು ಸಿಕ್ಕಿಬಿದ್ರು

ಓಎಂಸಿಗೆ ಗಣಿ ಗುತ್ತಿಗೆ ಪರವಾನಗಿ ನೀಡುವಾಗ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ, ಹಾಲಿ ಗೃಹ ಸಚಿವೆ ಸಬಿತಾ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಲಾಗಿತ್ತು. ಆದರೆ, ಸಬಿತಾ ಅವರನ್ನು ಬಿಟ್ಟು ಉಳಿದ ಇಬ್ಬರನ್ನು ಸಿಬಿಐ ಬಂಧಿಸಿದೆ.
2004ರಿಂದ 2009ರವರೆಗೆ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಸಂಪುಟದಲ್ಲಿ ಸಬಿತಾ ಗಣಿ ಸಚಿವರಾಗಿದ್ದಾಗ, ಓಎಂಸಿಗೆ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಅವಧಿಯಲ್ಲಿ ಗಣಿ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಶ್ರೀಲಕ್ಷ್ಮೀ ಅವರು ಸಬಿತಾ ಅವರ ಒಪ್ಪಿಗೆ ಸಿಕ್ಕ ಮೇಲೆ ಸರ್ಕಾರಿ ಆದೇಶಕ್ಕೆ ಸಹಿ ಹಾಕಿದ್ದರು.
'ನನಗೆ ಗಣಿಗಾರಿಕೆ ಸಂಬಂಧಿಸಿದ ಕಾನೂನು, ವಿಧೇಯಕಗಳೇನು ಗೊತ್ತಿಲ್ಲ. ಅಧಿಕಾರಿಗಳು ಹೇಳಿದಂತೆ ಗಣಿ ಲೈಸನ್ ನೀಡುವ ಸರ್ಕಾರಿ ಆದೇಶಕ್ಕೆ ಸಹಿ ಹಾಕಿದ್ದೆ ಅಷ್ಟೇ' ಎಂದು ಸಬಿತಾ ತಮ್ಮ ಮುಗ್ಧತೆಯ ಪ್ರದರ್ಶನ ಮಾಡಿದ್ದಾರೆ.
ಆದರೆ, ಕಾನೂನು ಬಗ್ಗೆ ಅರಿವಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಜ್ಞಾನದ ನೆಪವೊಡ್ಡಿರುವ ಸಬಿತಾ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ, ಆಕೆ ಈಗಿರುವ ಸ್ಥಾನಮಾನ, ಜಾತಿ ಲೆಕ್ಕಾಚಾರದಿಂದ ಸಿಬಿಐ ಕೂಡಾ ಕೈ ಕಟ್ಟಿ ಕೊಂಡು ಸುಮ್ಮನೆ ನಿಲ್ಲುವಂತಾಗಿದೆ.












Click it and Unblock the Notifications