ಬಳ್ಳಾರಿಯಲ್ಲಿ ಅರೆಮಿಲಿಟರಿ ಪಡೆಯ ಬೂಟಿನ ಸಪ್ಪಳ

ಹಣಬಲ, ತೋಳ್ಬಲ ಮತ್ತು ಜನಬಲದ ಪ್ರದರ್ಶನ ಭರ್ಜರಿ ನಡೆಯುವ ಎಲ್ಲ ಸಾಧ್ಯತೆಗಳಿರುವುದರಿಂದ, ಸುರಕ್ಷಿತವಾಗಿ ಚುನಾವಣೆ ನಡೆಸುವ ನಿಟ್ಟಿನಿಂದ ಅರೆಮಿಲಿಟರಿ ಪಡೆಯ ನಾಲ್ಕು ತುಕುಡಿಗಳನ್ನು ಕರೆತರಲಾಗಿದೆ. ಕಣದಲ್ಲಿ ಈಗಾಗಲೆ ಸಾಕಷ್ಟು ಹಣದ ಹೊಳೆ ಹರಿಯಲು ಪ್ರಾರಂಭಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಂದಿಳಿದಿರುವ ಸುಮಾರು 400 ಮಿಲಿಟರಿ ಸೈನಿಕರು ಇಂದು ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ಮಾಡಿದರು. ಭದ್ರತೆಯ ಬಗ್ಗೆ ಚಿಂತಿಸದೆ ಮುಕ್ತವಾಗಿ ಮತದಾನದಲ್ಲಿ ಜನರು ಭಾಗವಹಿಸಬೇಕೆಂಬ ಉದ್ದೇಶದಿಂದ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಈ ಚುನಾವಣೆ ಇಡೀ ಬಿಜೆಪಿಗೆ ಭಾರೀ ಪ್ರತಿಷ್ಠೆ ಕಣವಾಗಿದೆ. ಪಕ್ಷ ತೊರೆದ ನಂತರ ಪಕ್ಷೇತರರಾಗಿ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿರುವ ಶ್ರೀರಾಮುಲು ವಿರುದ್ಧ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ ಸೇರಿದಂತೆ ಬಿಜೆಪಿ ಎಲ್ಲ ಪ್ರಮುಖ ನಾಯಕರು ಗಾದಿ ಲಿಂಗಪ್ಪ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ರೆಡ್ಡಿ ಸಹೋದರರಲ್ಲಿ ಅತ್ಯಂತ ಪ್ರಭಾವಿಯಾಗಿರುವ ಜನಾರ್ದನ ರೆಡ್ಡಿ ಚಂಚಲಗುಡ ಜೈಲಿನಲ್ಲಿರುವುದು ಶ್ರೀರಾಮುಲುಗೆ ಭಾರೀ ಹಿನ್ನಡೆಯಾಗಿ ಕಂಡುಬಂದಿದೆ. ಶ್ರೀರಾಮುಲುಗೆ ಜೆಡಿಎಸ್ ಪಕ್ಷದ ನೇರ ಬೆಂಬಲ ದೊರೆತಿದ್ದರೂ, ತಮ್ಮ ಕ್ಷೇತ್ರವನ್ನು ಕಾಪಾಡಿಕೊಳ್ಳುವರೆ ಎಂಬುದು ಡಿ.4ರಂದು ನಡೆಯಲಿರುವ ಮತ ಎಣಿಕೆಯಲ್ಲಿ ತಿಳಿದುಬರಲಿದೆ.












Click it and Unblock the Notifications