ಖಾಸಗಿ ದೂರಿಗೆ ಇನ್ನಿಲ್ಲ ಮನ್ನಣೆ: ಅಶೋಕ್, ನಿರಾಣಿ ಸೇಫ್

ಇದನ್ನು ಆಲಿಸಿ ಪರಪ್ಪನ ಅಗ್ರಹಾರಕ್ಕೆ ಹೋಗಲು ಸಾಲಿನಲ್ಲಿ ನಿಂತಿರುವ ಅಶೋಕ, ನಿರಾಣಿ ವಗೈರೆಗಳಿಗೆ ಎಲ್ಲಿಂದ ನಗಬೇಕೋ ತಿಳಿಯದಾಗಿದೆ. ತಮ್ಮ ಮಾಜಿ ಅಧಿನಾಯಕರೊಬ್ಬರು ಇದೇ ನೆಪವೊಡ್ಡಿ ಜೈಲಿನಿಂದ ಪಾರಾಗಿ ಬಂದಿರುವುದನ್ನು ಕಣ್ಣಾರೆ ಪರಾಂಬರಿಸಿರುವ ಈ ಧೀಮಂತ ನಾಯಕರು ಒಂದು 'ಪಿಂಟ್' ಹಾಕಿ ಆನಂದ ತುಂದಲಿತರಾದರು ಎಂಬುದು ಶುದ್ಧ ಕುಹಕವಷ್ಟೇ.
ದೇಶದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಾಕ್ಷಾತ್ ಮಾಜಿ ಮುಖ್ಯಮಂತ್ರಿಯೇ ಜೈಲುಪಾಲಾದ ಪ್ರಕರಣ ನಡೆದಿದ್ದು ಘನ ನ್ಯಾಯಾಲಯವನ್ನು ಭಾರಿ ಚಿಂತೆಗೀಡುಮಾಡಿತ್ತು ಎನಿಸುತ್ತದೆ. ಆದ್ದರಿಂದ ಖಾಸಗಿ ದೂರಿಗೆ ಇನ್ನು ಮುಂದೆ ಮನ್ನಣೆ ಬೇಡವೇ ಬೇಡ ಎಂಬರ್ಥದ ತೀರ್ಪು ನೀಡಿ ಕೈತೊಳೆದುಕೊಂಡಿದೆ. ಅಲ್ಲಿಗೆ ಇನ್ನು ಮುಂದೆ ಯಾರಾದರೂ ಖಾಸಗಿ ದೂರು ಹಿಡಿದು ಕೋರ್ಟಿಗೆ ಹೋದರೆ ಆ ಕೇಸು ಬರಕತ್ತಾಗುವುದು ಅನುಮಾನವೇ.
ಆದರೆ ಈ ತೀರ್ಪು ಆರೋಪಿಗಳಿಗೆ ಸಂಜೀವಿನಿಯಾಗುವ ಅಪಾಯವಿದೆ. ಕಾನೂನಿನ ಹಿಡಿತದಿಂದ ಬಚಾವಾಗಲು ಹವಣಿಸುತ್ತಿದ್ದ ಅಶೋಕ, ನಿರಾಣಿ ವಗೈರೆಗಳು ಸದ್ಯದಲ್ಲೇ ತಮ್ಮ ವಿರುದ್ಧ ಲೋಕಾಯುಕ್ತ ಕೋರ್ಟಿನಲ್ಲಿ ಎಫ್ಐಆರ್ ದಾಖಲಾಗಿ ಕೋಳ ತೊಡಿಸುವ ಸಮಯ ಸಮೀಪಿಸುತ್ತಿದ್ದಂತೆ 'ನೋಡಿ, ಖಾಸಗಿ ದೂರಿನ ಬಗ್ಗೆ ಮೊನ್ನೆಯಷ್ಟೇ ನಮ್ಮ ನ್ಯಾಯಾಲಯ ಏನು ಹೇಳಿದೆ ಎಂಬುದನ್ನು ವಸಿ ತಿರುವಿ ಹಾಕಿ ಮೈಲಾರ್ಡ್' ಎಂದು ನ್ಯಾ. ಸುಧೀಂದ್ರರಾವ್ ಅವರಿಗೇ ಕೇಳಿದರೆ ಆಶ್ಚರ್ಯವೇನೂ ಇಲ್ಲ!
ಈ ಗೂಡಾರ್ಥವನ್ನು ಅರಿತೇ ಅಶೋಕ ಮಹಾರಾಜರು ನಿನ್ನೆ ರಾತ್ರಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅರಮನೆಗೆ ಭೇಟಿ ನೀಡಿ, ಮನೆಯ ಯಜಮಾನನನ್ನು ಉದ್ದೇಶಿ 'ನೀವೇ ನಮ್ಮ ನಿಜವಾದ ನಾಯಕರು, ಸೂಕ್ತ ಮಾರ್ಗದರ್ಶಿ' ಎಂದು ಉದ್ದಂಡ ನಮಸ್ಕಾರ ಹಾಕಿ ಬಂದರಂತೆ.












Click it and Unblock the Notifications