ಬಸವನಗುಡಿಯಲ್ಲಿ ರಥಯಾತ್ರೆ ಸಮಾವೇಶ: ಜೋಶಿ ಉಸ್ತುವಾರಿಗೆ

ಪೂರ್ವ ನಿಗದಿಯಂತೆ ಗೃಹ ಸಚಿವ ಆರ್. ಅಶೋಕ್ ಅವರು ಸಮಾವೇಶದ ಉಸ್ತುವಾರಿ ವಹಿಸಿದ್ದರು. ಆದರೆ ಅವರಿಗೆ ಭೂಹಗರಣದ ಭೂತ ಸುತ್ತುವರಿದಿರುವುದರಿಂದ ಉಸ್ತುವಾರಿ ಜವಾಬ್ದಾರಿಯಿಂದ ಅವರಿಗೆ ಕೊಕ್ ನೀಡಲಾಗಿದೆ. ಅಸಲಿಗೆ ಅವರು ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಅನುಮಾನವಿದೆ.
ಇಂತಹ ಪರಿಸ್ಥಿತಿಯಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸುವುದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜನಚೇತನಾ ಯಾತ್ರೆಯ ರಾಷ್ಟ್ರೀಯ ಸಂಚಾಲಕ ಎಚ್.ಎನ್. ಅನಂತ ಕುಮಾರ್ ಅವರು ಭಾನುವಾರದ ಬಸವನಗುಡಿ ಸಮಾವೇಶವದ ಉಸ್ತುವಾರಿಯನ್ನು ತಮ್ಮ ಹುಬ್ಬಳ್ಳಿಯ ಪುರಾತನ ಮಿತ್ರ ಪ್ರಹ್ಲಾದ್ ಜೋಶಿ ಅವರಿಗೆ ವರ್ಗಾಯಿಸಿದ್ದಾರೆ.
ನಾಡಿನ ಬಹುತೇಕ ಅಧಿನಾಯಕರು ಒಂದಲ್ಲ ೊಂದು ಹಗರಣಗಳಲ್ಲಿ ಸಿಲುಕಿ ಜೈಲುವಾಸಿಗಳಾಗಿರುವ ಸಂದರ್ಭದಲ್ಲಿ 'ಅಡ್ವಾಣಿ ಅವರಿಗೆ ಯಾವುದೇ ರೀತಿಯಲ್ಲೂ ಮುಜುಗರ ಉಂಟಾಗದಂತೆ ಸಮಾವೇಶ ನಡೆಸಲಾಗುವುದು' ಎಂದು ಪಕ್ಷದ ರಾಜ್ಯ ವಕ್ತಾರರೂ ಆಗಿರುವ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದೇ ವೇಳೆ, ವೇದಿಕೆ ಮೇಲೆ ಯಾರೆಲ್ಲ ಇರಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಕಳಂಕಿತರು ವೇದಿಕೆ ಅಲಂಕರಿಸುವರೇ ಎಂಬ ಬಗ್ಗೆ ಸಮಾವೇಶದ ಹಿಂದಿನ ದಿನವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.
ಯಾತ್ರೆ ಬಗ್ಗೆ ಜನಜಾಗೃತಿ:
ಅಡ್ವಾಣಿ ಅವರ ಜನಚೇತನ ಯಾತ್ರೆ ಸಂಚರಿಸುವ ಜಿಲ್ಲೆಗಳಲ್ಲಿ ಮುಂಚಿತವಾಗಿಯೇ ಜನ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಜನ ಜಾಗೃತಿ ನಡೆಸಲಾಗುವುದು. ಇದಕ್ಕಾಗಿ ರಥದ ಮಾದರಿಯನ್ನೇ ಬಳಸಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಅಲ್ಲದೆ, ಯಾತ್ರೆ ಮತ್ತು ಸಮಾವೇಶ ಹಿನ್ನೆಲೆಯಲ್ಲಿ ಇದೇ ತಿಂಗಳ 28ರಂದು ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳ ಸಭೆಯನ್ನೂ ಕರೆಯಲಾಗಿದೆ ಎಂದು ಹೇಳಿದರು.












Click it and Unblock the Notifications