ಕದ್ದು ಪಾಸಾದ ವೈದ್ಯರಿಗೆ ಆಯಿತು ತಕ್ಕ ಶಾಸ್ತಿ!

ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಳ್ಳಾರಿ, ಗುಲ್ಬರ್ಗಾ, ಮಂಡ್ಯ, ಬೆಂಗಳೂರಿನಲ್ಲಿ ಒಟ್ಟು 8 ಜನರನ್ನು ಬಂಧಿಸಿದ್ದಾರೆ. ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ವೈದ್ಯರಾದ ಡಾ. ವಿ. ಸುರೇಶ್, ಡಾ. ಭರತ್ ಕುಮಾರ್, ಹಾಗು ಡಾ. ಧನುಂಜಯ್ ಬಂಧಿತರು. ಬಂಧಿತರನ್ನು ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಧೀಶ ಕುಲಕರ್ಣಿ ಆದೇಶಿಸಿದ್ದಾರೆ.
ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳು ಜನವರಿ 30ರಂದು ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ನ ಕಾಲೇಜಿನಲ್ಲಿ ನಡೆದಿದ್ದವು. ಪರೀಕ್ಷೆಗೆ ಹಾಜರಾದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಒಂದೇ ಕೊಠಡಿಯಲ್ಲಿ ಕುಳಿತು ಕೆಲ ವಿಮ್ಸ್ ನ ಕರ್ತವ್ಯನಿರತ ವೈದ್ಯರು ಸಾಮೂಹಿಕ ನಕಲು ಮಾಡಿದ್ದರಿಂದ ಆ ವೈದ್ಯರು ಮತ್ತು ಅವರ ಪತ್ನಿಯರಿಗೆ 7 ರ್ಯಾಂಕ್ಗಳು ಬಂದಿದ್ದವು.
ಅಷ್ಟೇ ಅಲ್ಲದೆ ಈ ಕೊಠಡಿಯ ಇನ್ನಿತರ 20ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪಿಜಿ ಸೀಟು ಗ್ಯಾರೆಂಟಿಯ ಅಂಕಗಳು ಬಂದಿದ್ದವು. ವಿಮ್ಸ್ನಲ್ಲಿನ ವೈದ್ಯರು, ಪ್ರಭಾವಿ ಮುಖಂಡರ ಸಂಬಂಧಿಗಳು ರ್ಯಾಂಕ್ ಗಿಟ್ಟಿಸಿದ ಈ ಪ್ರಕರಣ ಹಲವು ಅನುಮಾನ ಹಾಗೂ ಸಂಶಯಕ್ಕೆ ಎಡೆ ಮಾಡಿಕೊಟ್ಟು, ಅನೇಕ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿ ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ಒಪ್ಪಿಸಿತ್ತು. ಸಿಐಡಿ ಪೊಲೀಸರು ಈ ತನಿಖೆಯನ್ನು ಚುರುಕುಗೊಳಿಸಿ ಈ ವರೆಗೆ ಒಟ್ಟು 12 ಜನರನ್ನು ಬಂಧಿಸಿದ್ದಾರೆ.
ಈ ಪರೀಕ್ಷೆಯಲ್ಲಿ ಅಕ್ರಮವೆಸಗಿ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದ ಡಾ. ಭಾರತಿ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿರುವ ಡಾ. ಪಿರ್ದೋಸ್ ಸುಲ್ತಾನ, ಡಾ. ಸಂಕೀರ್ತ್ ವಿ ಮತ್ತು ಹಾಗು ಗುರ್ಲ್ಬರ್ಗಾ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಡಾ. ರೇಣುಕಾ, ಬಳ್ಳಾರಿಯ ವಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಡಾ. ಶಿಲ್ಪ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಎಲ್ಲರನ್ನೂ ಬಳ್ಳಾರಿಯ ಸೆಂಟ್ರಲ್ ಜೈಲ್ಗೆ ಕರೆ ತರಲಾಗುತ್ತಿದೆ.
ಸಿಐಡಿ ಈ ಮೊದಲು ಈ ಪ್ರಕರಣದಲ್ಲಿ ವೈದ್ಯರುಗಳಾದ ಮುರಾರಿ. ಹೇಮಂತರಾಜ್ ಮತ್ತು ವಿಮ್ಸ್ ಕಾಲೇಜಿನ ಪರೀಕ್ಷಾ ವಿಭಾಗದ ಕ್ಲಾರ್ಕ್ಗಳಾದ ಮಲ್ಲಿಕಾರ್ಜುನ, ಡೇವಿಡ್ ಅವರುಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಸಿಐಡಿ ಬಳ್ಳಾರಿ ಕಚೇರಿಯ ಡಿವೈಎಸ್ಪಿ ಚಲಪತಿ ಮತ್ತು ಪಿಎಸ್ಐ ಎಚ್.ಈ ಮಂಜಪ್ಪ ತನಿಖೆಯನ್ನು ನಡೆಸುತ್ತಿದ್ದಾರೆ. ಇದಲ್ಲದೇ ಈ ಹಗರಣದ ಪ್ರಮುಖ ರೂವಾರಿ ಮತ್ತು ಆರೋಪಿ ವಿಮ್ಸ್ನ ವಿಧಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ವಿನಾಯಕ ಪ್ರಸನ್ನನ ಬಂಧನಕ್ಕೆ ವಾರಂಟ್ ಜಾರಿಯಾಗಿದೆ.
ವಿಮ್ಸ್ಗೆ ಅನಧಿಕೃತವಾಗಿ ಗೈರು ಹಾಜರಾಗಿರುವ ಕಾರಣ ವಿಮ್ಸ್ ನಿದೇರ್ಶಕ ಡಾ. ಬಿ. ದೇವಾನಂದ ಅವರು ಡಾ. ವಿನಾಯಕ ಪ್ರಸನ್ನ ಅವರನ್ನು ಅಮಾನತು ಮಾಡಿ ಆದೇಶ ಜಾರಿ ಮಾಡಿದ್ದಾರೆ. ಡಾ. ವಿನಾಯಕ ಪ್ರಸನ್ನ ಅವರು ಧಾರವಾಡದ ಹೈಕೋರ್ಟ್ ಪೀಠದಲ್ಲಿ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ.












Click it and Unblock the Notifications