ಜಂಬೂ ಸವಾರಿ : ವೆಬ್ಸೈಟ್ನಲ್ಲಿ ನೇರ ಪ್ರಸಾರ
ಜಂಬೂ ಸವಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ದಸರಾ ಮಹೋತ್ಸವ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗುರುವಾರ ಮಧ್ಯಾಹ್ನ 12.45 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಂಪುಟದ ಸಚಿವರೊಂದಿಗೆ ಉತ್ತರ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ ನಾಡಿನ ಜನತೆಗೆ ವಿಜಯದಶಮಿಯ ಶುಭಸಂದೇಶ ನೀಡಲಿದ್ದಾರೆ.
ಆನಂತರ 1.15ರಿಂದ 1.30 ಗಂಟೆಯೊಳಗೆ ಅಂಬಾರಿ ಹೊತ್ತ ಬಲರಾಮ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಮುಖ್ಯಮಂತ್ರಿಗಳು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಜಂಬೂ ಸವಾರಿ ಮಾರ್ಗ : ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಬಲರಾಮನೊಂದಿಗೆ ಇತರೆ ಗಜಪಡೆಗಳಲ್ಲದೆ, ಅಶ್ವದಳ, ಒಂಟೆ, ಪೊಲೀಸ್ ವಾದ್ಯವೃಂದ, ಫಿರಂಗಿಗಳು, ಜಾನಪದ ಕಲಾತಂಡಗಳು ಹಾಗೂ ಸುಮಾರು 34 ಸ್ತಬ್ದ ಚಿತ್ರಗಳು ಜಂಬೂಸವಾರಿಯಲ್ಲಿ ಸಾಗಲಿವೆ. ಜಂಬೂ ಸವಾರಿ ಸಾಗುವ ಮಾರ್ಗವಾದ ಅರಮನೆ ಆವರಣದಿಂದ ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಹೈವೆ ಸರ್ಕಲ್ ಮೂಲಕ ಬನ್ನಿಮಂಟಪದವರೆಗೆ ಇಕ್ಕೆಡೆಗಳಲ್ಲಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಅಲ್ಲದೆ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು, ಔಷಧಿ ವ್ಯವಸ್ಥೆಯನ್ನು ಮಾಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಲಾಗಿದೆ. ರಾತ್ರಿ ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ.
ವೆಬ್ಸೈಟ್ನಲ್ಲಿ ನೇರ ಪ್ರಸಾರ : ಈ ಬಾರಿಯ ದಸರಾ ಜಂಬೂ ಸವಾರಿಯನ್ನು ವಿಶ್ವದಾದ್ಯಂತ ಜನರು ವೀಕ್ಷಿಸಲು ಅನುಕೂಲವಾಗುವಂತೆ ವೆಬ್ಸೈಟ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಈ ಜಂಬೂ ಸವಾರಿಯನ್ನು ಬೆಳಿಗ್ಗೆ 11.30ರಿಂದ ರಾತ್ರಿ ಪಂಜಿನ ಕವಾಯತುವರೆಗೆ http://www.mysoredasara.gov.in ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.