ರೆಡ್ಡಿ ಅಕ್ರಮಗಳಿಗೆ ನೀರೆರೆದ ಆಂಧ್ರ ಅಧಿಕಾರಿಗಳ ಸಾಚಾತನ ಬಯಲು
ಬಳ್ಳಾರಿ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ನಡೆಸಿರುವ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐಗೆ ಅನೇಕ ಮಹತ್ವದ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ಆತಂಕದ ವಿಷಯವೆಂದರೆ, ಆಂಧ್ರದ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ಅನಂತಪುರ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಕಡತಗಳನ್ನು ಜನಾ ರೆಡ್ಡಿಯ ಪರವಾಗಿ ತಿದ್ದಿದ್ದಾರೆ.
ಈ ಅಕ್ರಮದಿಂದಾಗಿ ಪರವಾನಗಿ ವಂಚಿತರಾದ ಉದ್ಯಮಿ ಸಿ. ಶಶಿಕುಮಾರ್ ಸಿಬಿಐ ಎದುರು ಹಾಜರಾಗಿ ಕಳ್ಳ ವ್ಯವಹಾರಗಳನ್ನು ಒಂದೊಂದಾಗಿ ಬಿಚ್ಚಿಟ್ಟುತ್ತಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ. ಇಲಾಖೆಯ ಅಧಿಕಾರಿಗಳು ಈರೀತಿ ಸಿದ್ಧಪಡಿಸಿದ್ದ ಎರಡು ವಿಭಿನ್ನ ಕಡತಗಳನ್ನು ಶಶಿಕುಮಾರ್ ಸಿಬಿಐಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
2009ರಲ್ಲಿ ಜಿಲ್ಲೆಯ ಡಿ. ಹೀರೇಲಾಲ್ ಮಂಡಲದ ಎಚ್. ಸಿದ್ದಾಪುರಂ ಮತ್ತು ಮಲ್ಲಪ್ಪನಗುಡಿ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆಗೆ ಕೋರಿದ್ದ ಉದ್ಯಮಿಗಳಿಗೆ ಇಲಾಖೆಯು ನೀಡಿರುವ ಟಿಪ್ಪಣಿಯೇ ಬೇರೆ. ಈ ಟಿಪ್ಪಣಿಯಿದ್ದ ಕಡತದ ನಕಲನ್ನು ಶಶಿಕುಮಾರ್ 2008ರಲ್ಲಿ ಮಾಹಿತಿ ಹಕ್ಕು ಅನುಸಾರ ಪಡೆದುಕೊಂಡಿದ್ದರು.
ಒಂದು ವರ್ಷದ ಬಳಿಕ ಮತ್ತೊಮ್ಮೆ ಶಶಿಕುಮಾರ್ 2009ರಲ್ಲಿ ಮಾಹಿತಿ ಕಾಯಿದೆ ಹಕ್ಕು ಅನುಸಾರ ಇದೇ ಮಾಹಿತಿಯನ್ನು ಕೋರಿದ್ದರು. ಆಶ್ಚರ್ಯವೆಂದರೆ ಎರಡನೇ ಬಾರಿ ನೀಡಿರುವ ಮೊದಲ ಮಾಹಿತಿಗಿಂತ ಭಿನ್ನವಾಗಿತ್ತು!
ಹೀಗೇಕೆ ಮಾಡಿದ್ದಾರೆಂದರೆ ಅಧಿಕಾರಿಗಳು ಜನಾ ರೆಡ್ಡಿಗೆ ನೆರವಾಗುವ ಸಲುವಾಗಿ ಕಡತಗಳನ್ನು ತಿದ್ದಿದ್ದಾರೆ. ಇದರಿಂದ ನಮ್ಮಂತಹ ಗಣಿ ಉದ್ಯಮಿಗಳಿಗೆ ಪರವಾನಗಿ ದೊರೆಯದೆ ನಷ್ಟವುಂಟಾಯಿತು ಎಂದು ಶಶಿಕುಮಾರ್ ಸಿಬಿಐ ಎದುರು ಹಾಜರಾಗಿ ಅಲವತ್ತುಕೊಂಡಿದ್ದಾರೆ.