ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ

ಧಾರವಾಡ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ದುಡಿಸಿಕೊಂಡಿರುವ ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯಕ್ಕೆ ಈ ಪ್ರಶಸ್ತಿ ಲಭಿಸಿದೆ. ಇಲ್ಲಿಯವರೆಗೆ ಕುವೆಂಪು, ಶಿವರಾಮ ಕಾರಂತ, ದರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಕೃ ಗೋಕಾಕ, ಗಿರೀಶ್ ಕಾರ್ನಾಡ್ ಮತ್ತು ಯುಆರ್ ಅನಂತಮೂರ್ತಿಯವರು ಈ ಪ್ರಶಸ್ತಿಯನ್ನು ಪಡೆದ ಸಾಹಿತಿಗಳಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಒಡೆತನದ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ಸ್ಥಾಪಿಸಿದ್ದು, 1961ರಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಸಿರಿಸಂಪಿಗೆ, ಜೋಕುಮಾರಸ್ವಾಮಿ, ಮಹಾಮಾಯಿ, ಹರಕೆಯ ಕುರಿ, ಋಷ್ಯಶೃಂಗ, ಬೆಪ್ಪುತಕ್ಕಡಿ ಭೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಕಂಬಾರರ ಪ್ರಮುಖ ನಾಟಕಗಳು. ತಾವೇ ಬರೆದ ಕರಿಮಾಯಿ, ಕಾಡುಕುದುರೆ, ಸಂಗೀತಾ ಕಾದಂಬರಿಯನ್ನು ಆಧರಿಸಿ ಚಿತ್ರಗಳನ್ನು ಕೂಡ ಅವರು ತೆಗೆದಿದ್ದಾರೆ. ಅವರ ಸಿರಿಸಂಪಿಗೆ ನಾಟಕಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಕಂಬಾರರು ಬೆಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಂಬಾರರು ಸೇವೆ ಸಲ್ಲಿಸಿದ್ದಾರೆ. ಮಾತು ಮತ್ತು ಕೃತಿಗಳಲ್ಲಿ ಅಪ್ಪಟ ಧಾರವಾಡ ಸಂಸ್ಕೃತಿಯನ್ನು, ಜಾನಪದ ಸೊಗಡನ್ನು ಬಿಂಬಿಸುವ ಕಂಬಾರರಿಗೆ ದಟ್ಸ್ ಕನ್ನಡ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. [ಕಂಬಾರರ ಕುರಿತು ಅಂಜಲಿ ಲೇಖನ]












Click it and Unblock the Notifications