ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯ ಗೋಲ್ ಮಾಲ್ ಪತ್ತೆ

ಈ ಅವ್ಯವಹಾರದಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯೂ ಭಾಗಿಯಾಗಿದ್ದು, ಆಸ್ಪತ್ರೆಯ ಕಟ್ಟಡಗಳಿರುವ ಐದು ಎಕರೆ ಭೂಮಿ ಅಕ್ರಮ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವುಂಟಾಗಿದೆ ಎನ್ನಲಾಗಿದೆ.
ಏನಾಯಿತೆಂದರೆ 1991ರಲ್ಲಿ ಸೈಯದ್ ನಿಸಾರ್ ಎಂಬ ವ್ಯಕ್ತಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವುದಾಗಿ ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ 5 ಎಕರೆ ಭೂಮಿ ಪಡೆದಿದ್ದ. ಆದರೆ ಆಸ್ಪತ್ರೆ ನಿರ್ಮಿಸದೇ, ಅಪೊಲೋ ಆಸ್ಪತ್ರೆಗೆ ಜಾಗವನ್ನು ಗುತ್ತಿಗೆಗೆ ನೀಡಿ ಭಾರಿ ಮೊತ್ತದ ಬಾಡಿಗೆ ಪಡೆಯುತ್ತಿದ್ದ!
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಅಮೆರಿಕದಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿಕೊಂಡಿದ್ದ ಸೈಯದ್ ನಿಸಾರ್, ರಾಜ್ಯ ಸರ್ಕಾರದಿಂದ ಐದು ಎಕರೆ ಭೂಮಿ ಪಡೆದಿದ್ದ. ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ನಡೆಸಿದ ಮೌಲ್ಯಮಾಪನದ ಪ್ರಕಾರ ಆಗ 44 ಕೋಟಿ ರೂಪಾಯಿ ಮೌಲ್ಯ ಇದ್ದ ಈ ಭೂಮಿಯನ್ನು ಕೇವಲ 10 ಲಕ್ಷ ರೂಪಾಯಿ ಮೊತ್ತಕ್ಕೆ ನೀಡಲಾಗಿತ್ತು.
ನಿಗದಿತ ಉದ್ದೇಶಕ್ಕಾಗಿ ಮಾತ್ರ ಭೂಮಿಯನ್ನು ಬಳಕೆ ಮಾಡಬೇಕು ಎಂಬ ಷರತ್ತನ್ನು ಮಂಜೂರಾತಿ ಆದೇಶದಲ್ಲಿ ವಿಧಿಸಲಾಗಿತ್ತು. ಮಂಜೂರಾತಿ ನಂತರ ಈ ಭೂಮಿಯಲ್ಲಿ ಯಾವುದೇ ಆಸ್ಪತ್ರೆಯನ್ನೂ ನಿರ್ಮಿಸಿರಲಿಲ್ಲ.
ಮಂಜೂರಾತಿ ಆದೇಶದ ಷರತ್ತು ಉಲ್ಲಂಘಿಸಿ ಸೈಯದ್ ನಿಸಾರ್, ಅಪೋಲೊ ಆಸ್ಪತ್ರೆಗೆ ಈ ಭೂಮಿಯನ್ನು ಗುತ್ತಿಗೆ ನೀಡಿದ್ದ. ಅಪೋಲೊ ಆಸ್ಪತ್ರೆಯೂ ಮುಗುಮ್ಮಾಗಿ ಕಟ್ಟಡಗಳನ್ನು ಎಬ್ಬಿಸಿತು. ಈಗಲೂ ಅದೇ ಗುತ್ತಿಗೆ ಆಧಾರದಲ್ಲಿ ಅಪೋಲೊ ಆಸ್ಪತ್ರೆ ಈ ಭೂಮಿಯನ್ನು ಬಳಸುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ, ಜಮೀನು ಮಂಜೂರಾತಿಯನ್ನು ರದ್ದು ಮಾಡುವ ಪ್ರಕ್ರಿಯೆಗೆ ಬೆಂಗಳೂರು ನಗರ ಜಿಲ್ಲಾಡಳಿತ ಚಾಲನೆ ನೀಡಿದೆ. ಸೈಯದ್ ನಿಸಾರ್ ಗೆ ನೀಡಿರುವ ಮಂಜೂರಾತಿ ಆದೇಶವನ್ನು ರದ್ದು ಮಾಡುವುದು ಮೊದಲ ಹೆಜ್ಜೆ.
ನಂತರ ಈ ಭೂಮಿಯನ್ನು ಅಪೋಲೊ ಆಸ್ಪತ್ರೆಗೆ ಮಾರುಕಟ್ಟೆ ದರದಲ್ಲಿ ನೀಡುವುದೋ ಅಥವಾ ಬಾಡಿಗೆ ಆಧಾರದಲ್ಲಿ ನೀಡುವುದು ಸೇರಿದಂತೆ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಅವಕಾಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.












Click it and Unblock the Notifications