ಮಹೇಶ್ ಬಾಬು, ರಾಮ್ ಚರಣ್ ಮೇಲೆ ಸಿಬಿಐ ಕಣ್ಣು
ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಜಗತಿ ಪಬ್ಲಿಕೇಷನ್ ನ ವಿಜಯ ಸಾಯಿ ರೆಡ್ಡಿಯ ಮೇಲೆ ಸಿಬಿಐ ಕಣ್ಣು ಬಿದ್ದ ಮೇಲೆ ಈಗ ಟಾಲಿವುಡ್ ನ ಸ್ಟಾರ್ ಗಳಾದ ಮಹೇಶ್ ಬಾಬು ಹಾಗೂ ರಾಮಚರಣ್ ತೇಜ ವಿಚಾರಣೆಗೆ ಸಿಬಿಐ ಮುಂದಾಗಿದೆ.
ಎಮ್ಮಾರ್ ಎಂಜಿಎಫ್ ನಿರ್ಮಾಣದ ದೊಡ್ಡ ವಿಲ್ಲಾಗಳನ್ನು ಅತಿ ಕಡಿಮೆ ಬೆಲೆಗೆ ಕೊಂಡುಕೊಂಡ ಆರೋಪ ಈ ನಟರ ಮೇಲಿದೆ. ಇದಲ್ಲದೆ ಜನಾರ್ದನ ರೆಡ್ಡಿ ಪಾಲುದಾರಿಕೆಯ ಬ್ರಹ್ಮಣಿ ಉಕ್ಕು ಸಂಸ್ಥೆಯ ಪ್ರಮುಖ ಸದಸ್ಯೆ ಸಚಿವೆ ಗಲ್ಲಾ ಅರುಣಾ ಕುಮಾರಿ ಪುತ್ರಿ ಗಲ್ಲಾ ಪದ್ಮಾವತಿ ಕೂಡಾ ಸಿಬಿಐ ಹಿಟ್ ಲಿಸ್ಟ್ ನಲ್ಲಿದ್ದಾರೆ.
ಎಲ್ಲೆಡೆ ರೆಡ್ಡಿ ಬಂಧನದ ಬಿಸಿ: ಸೆ.14 ರಂದು ಮಹೇಶ್ ಬಾಬು ಹಾಗೂ ತಾರಾ ಪತ್ನಿ ನಮ್ರತಾ ವಿಚಾರಣೆಗೆ ಒಳಪಡಲಿದ್ದಾರೆ. ಸೆ.15 ರಂದು ರಾಮ ಚರಣ್ ಹಾಗೂ ಸೆ.16ರಂದು ಗಲ್ಲಾ ಪದ್ಮಾವತಿ ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಪ್ರತಿ ಚದರ ಅಡಿಗೆ 15,000 ರು ಬೆಲೆ ಬಾಳುವ ಭೂ ಪ್ರದೇಶವನ್ನು ಕೇವಲ 5,000 ಪ್ರತಿ ಚದರ ಅಡಿಗೆ ನೀಡಿ ವಿಲ್ಲಾಗಳನ್ನು ಪಡೆದ ಆರೋಪವನ್ನು ನಟರ ಮೇಲೆ ಹೊರೆಸಲಾಗಿದೆ.
ಜನಾರ್ದನ ರೆಡ್ಡಿ ಬಂಧನದ ನಂತರ ಯಾವುದೇ ವಿವರ ನೀಡಲು ಹಿಂಜರಿದಿರುವ ಸಿಬಿಐ ಜಂಟಿ ನಿರ್ದೇಶಕ ವಿ ಲಕ್ಷ್ಮಿನಾರಾಯಣ ಅವರು ಜಗನ್ ಕೇಸ್ ಜೊತೆಗೆ ನಟ ನಟಿಯರನ್ನು ವಿಚಾರಣೆಗೆ ಎಳೆಯುವ ಬಗ್ಗೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಜಗನ್ ಹಾಗೂ ಬಳ್ಳಾರಿ ರೆಡ್ಡಿ ಗಳಿಂದ ಲಾಭ ಪಡೆದವರಿಗೆ ಕಷ್ಟ ಕಾಲ ಆರಂಭವಾಗಿದೆ.