ಬೆಂಗಳೂರಿನ ಕಾರುಗಳ್ಳರಿಗೆ ಕಾಲ್ ಗರ್ಲ್ ಮುಳುವಾದಳು

ಏನಾಯಿತೆಂದರೆ, ಬೆಂಗಳೂರಿನಲ್ಲಿ ವಾಸವಾಗಿದ್ದ ಗೆಳೆಯರಾದ ದೀಪಕ್ ಕಿಶೋರ್ ಅಲಿಯಾಸ್ ಧನ್ ರಾಜ್ ಹಾಗೂ ಮೊಹಮದ್ ಮುರಸಲೀನ್ ಪಾಷಾ ಹವ್ಯಾಸಿ ಕಳ್ಳರು. ಅದರಂತೆ ಹುಬ್ಬಳ್ಳಿಯಿಂದ ಕುಟುಂಬವೊಂದನ್ನು ಮುರ್ಡೇಶ್ವರಕ್ಕೆ ಕರೆದೊಯ್ಯುವುದಾಗಿ ಹೇಳಿ ಕಾರನ್ನು ಬಾಡಿಗೆಗೆ ಪಡೆಯುವ ನಾಟಕವಾಡಿದ್ದಾರೆ. ಜತೆಗಿರಲಿ ಎಂದು ಕಾಲ್ ಗರ್ಲ್ ಒಬ್ಬಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
ಗಣೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಗೆ ಅವಳನ್ನು ತನ್ನ ಪತ್ನಿಯೆಂದು ಧನರಾಜ್ ಪರಿಚಯಿಸಿದ್ದಾನೆ. ಯಾಮಾರಿದ ಗಣೇಶ್ ಟ್ರಾವೆಲ್ಸ್ ನವರು ಮಜಬೂತಾದ ಸ್ಪೋರ್ಟ್ಸ್ ವೆಹಿಕಲ್ ಅನ್ನು ಚಾಲಕನ ಸಮೇತ ಕಳಿಸಿದ್ದಾರೆ. ಚಾಲಕನ ಸಮೇತ ಮೂವರೂ ಜುಲೈ 31ರಂದು ಹುಬ್ಬಳ್ಳಿಯತ್ತ ಹೊರಟಿದ್ದಾರೆ.
ದಾರಿಯಲ್ಲಿ ಸಾಗರ ಬಳಿ ಊಟಕ್ಕೆಂದು ವಾಹನ ನಿಲ್ಲಿಸಿದ್ದಾರೆ. ಅಲ್ಲಿ ಕಬ್ಬಿಣದ ರಾಡುಗಳಿಂದ ಚಾಲಕನನ್ನು ಚೆನ್ನಾಗಿ ಬಡಿದಿದ್ದಾರೆ. ಚಾಲಕ ಸತ್ತೇ ಹೋದನೆಂದು ಹಾದಿ ಬದಿಯಲ್ಲೇ ಬಿಸಾಕಿ, ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ದಾರಿಹೋಕರು ಚಾಲಕನನ್ನು ಆಸ್ಪತ್ರೆಗೆ ಸೇರಿಸಿ, ಪ್ರಾಣಾಪಾಯದಿಂದ ಬಚಾವು ಮಾಡಿದ್ದಾರೆ.
ಇತ್ತ, ಕಾರುಗಳ್ಳರಿಬ್ಬರೂ ತಮ್ಮೊಂದಿಗೆ ಕರೆದೊಯ್ದಿದ್ದ ಕಾಲ್ ಗರ್ಲ್ ಗೆ ಜೀವ ಬೆದರಿಕೆಯೊಡ್ಡಿ, ವಿಷಯ ಬಹಿರಂಗಪಡಿಸದಂತೆ ತಾಕೀತು ಮಾಡಿದ್ದಾರೆ. ಜತೆಗೆ ಅವಳ ಕೈಯಲ್ಲಿ ಒಂದಷ್ಟು ಹಣವನ್ನೂ ಇಟ್ಟಿದ್ದಾರೆ. ಆದರೆ ಅವಳೋ, ಬೆಂಗಳೂರಿಗೆ ವಾಪಸಾಗುತ್ತಿದ್ದಂತೆ ನೇರವಾಗಿ ಸಿಸಿಬಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ. ಜತೆಗೆ ಕಾರುಗಳ್ಳರ ಮೊಬೈಲ್ ನಂಬರನ್ನೂ ನೀಡಿದ್ದಾಳೆ. ಪೊಲೀಸರಿಗೆ ಅಷ್ಟು ಸಾಕಾಗಿತ್ತು.
ಕಾರ್ಯಾಚರಣೆಗೆ ಇಳಿದ ಎಸಿಪಿ ನ್ಯಾಮೇಗೌಡ ನೇತೃತ್ವದ ತಂಡ ಮೊಬೈಲ್ ಕರೆಗಳ ಜಾಡನ್ನು ಹಿಡಿದು ಆರೋಪಿಗಳಿಬ್ಬರನ್ನೂ ಬಂಧಿಸಿ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ, ಕಾರಿನ ದಾಖಲೆಗಳನ್ನು ಫೋರ್ಜರಿ ಮಾಡಿ, ಹೊಸ ದಾಖಲೆಗಳನ್ನು ಸೃಷ್ಟಿಸಿದ ಖದೀಮರು, ಕಾರನ್ನು ಮಾರಾಟ ಮಾಡುವ ಹಂತದಲ್ಲಿದ್ದರು.
ಧನ್ ರಾಜ್ ಮೂಲತಃ ಉತ್ತರ ಕರ್ನಾಟಕದ ಆಂಕೋಲಾ ನಿವಾಸಿ. ಅವ ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ. ಅದರಿಂದ ಹೊರಬರಲು ಈ ಕುಕೃತ್ಯಕ್ಕೆ ಕೈಹಾಕಿದ್ದ.












Click it and Unblock the Notifications