ಬಂಧನ ಭೀತಿ: ತೀರ್ಥಯಾತ್ರೆಗೆ ಹೊರಟ ಯಡಿಯೂರಪ್ಪ
ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯಡಿಯೂರಪ್ಪ ಅವರು ಬೆಳಗ್ಗೆ 10.30ಕ್ಕೆ ಆಸ್ಪತ್ರೆಯಿಂದ ಹೊರಬಂದು ಮಾಧ್ಯಮದ ಜತೆ ಮಾತನಾಡಿದರು. ನ್ಯಾಯಾಲಯ ತಮ್ಮ ವಿರುದ್ಧ ಗರಂ ಆಗಿರುವುದು ಮನದಟ್ಟಾಗುತ್ತಿದ್ದಂತೆ 'ನ್ಯಾಯಾಲಾಯಕ್ಕೆ ಶರಣಾಗುವೆ. ನ್ಯಾಯಾಲಯ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುವೆ. ಮಾಧ್ಯಮ ಮಿತ್ರರು ನೀವಿಂದು ಹೆಚ್ಚು ಉತ್ಸುಕರಾಗಿದ್ದೀರಿ ಎಂಬುದು ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ನೋಡೋಣ ಏನೆಲ್ಲಾ ಆಗುತ್ತದೋ' ಎಂದು ನಗೆಯಾಗಾಡುತ್ತಾ ಪ್ರತಿಕ್ರಿಯಿಸಿದರು.
ಹಿರಿಯ ಸಚಿವರಾದ ಸೋಮಣ್ಣ ಮತ್ತು ಆಚಾರ್ಯ ಯಡಿಯೂರಪ್ಪ ಅವರ ಜತೆಗಿದ್ದರು. ಇದೇ ವೇಳೆ ಯಡಿಯೂರಪ್ಪ ಅವರ ಇಬ್ಬರು ಪುತ್ರಿಯರಾದ ಉಮಾದೇವಿ ಮತ್ತು ತಾರಾದೇವಿ ಸಹ ಅವರಿಗೆ ಸಾಥ್ ನೀಡಿದ್ದಾರೆ. ಆಸ್ಪತ್ರೆಯಿಂದ ನೇರವಾಗಿ ಗವಿ ಗಂಗಾಧರೇಶ್ವರ ಗುಡಿಗೆ ಭೇಟಿ ನೀಡಿದರು. ಅಲ್ಲಿಂದ ದೇವರ ದರ್ಶನ ಪಡೆದು, ಸೀದಾ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸಕ್ಕೆ ತೆರಳಿದ್ದಾರೆ.
ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಸಚಿವರು ಮತ್ತು ಆಪ್ತ ಶಾಸಕರು ಯಡಿಯೂರಪ್ಪ ನಿವಾಸದಲ್ಲಿ ಆಪ್ತ ಸಮಾಲೋಚನೆ ನಡೆಸಿದ್ದಾರೆ.
ಶಿವಮೊಗ್ಗ ಭೂ ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಮಧ್ಯಾಹ್ನದ ವೇಳೆಗೆ ಲೋಕಾಯುಕ್ತ ಕೋರ್ಟಿನಲ್ಲಿ ಯಡಿಯೂರಪ್ಪ ಅವರು ಸೋಮವಾರ ಖುದ್ದಾಗಿ ಹಾಜರಾಗಬೇಕಿದೆ.