ಅಣ್ಣಾ ಎಫೆಕ್ಟ್: ಭಾರತಕ್ಕೆ ಮರಳಲು ಸೋನಿಯಾ ಮೇಡಂ ಆತುರ
ವೈದ್ಯರು ಅಕ್ಟೋಬರ್ ವರೆಗೂ ವಿಶ್ರಾಂತಿ ಅವಶ್ಯ ಎಂದಿದ್ದರೂ, ಭಾರತದಲ್ಲಿ ಎದ್ದಿರುವ ಅಣ್ಣಾ ಹಜಾರೆ ಬಿರುಗಾಳಿಗೆ ಸಿಕ್ಕಿ ಪಕ್ಷವು ಪತರಗುಟ್ಟಿತ್ತಿರುವ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸಲು ಅಧಿನಾಯಕಿ ಸೋನಿಯಾ ಸೆಪ್ಟೆಂಬರ್ 5 ರಂದು ವಾಪಸಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೇಡಂ ಆರೋಗ್ಯ ಸಾಕಷ್ಟು ಸುಧಾರಿಸಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರಾದರೂ ಅಣ್ಣಾ ವಿಷಯ ಪಕ್ಷವನ್ನು ಸಾಕಷ್ಟು ಹೈರಾಣಗೊಳಿಸಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆಯೊದಗಿದೆ. ಆದ್ದರಿಂದ ಡ್ಯಾಮೇಜ್ ಕಂಟ್ರೋಲಿಗಾಗಿ ಸೋನಿಯಾ ದೌಡಾಯಿಸುತ್ತಿದ್ದಾರೆ ಎನ್ನಲಾಗಿದೆ.
ಸೋನಿಯಾ ಅನುಪಸ್ಥಿತಿಯಲ್ಲಿ ಅವರ ಪುತ್ರ ರಾಹುಲ್ ಗಾಂಧಿ, ಎಕೆ ಆಂಟನಿ, ಅಹಮದ್ ಪಟೇಲ್ ಮತ್ತು ಜನಾರ್ದನ ದ್ವಿವೇದಿ ಅವರು ಪಕ್ಷದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮೇಡಂ ಸೋನಿಯಾಗೆ ಅಣ್ಣಾ ಹೋರಾಟದ ಬಗ್ಗೆ ಅಪ್ ಡೇಟ್ ಮಾಡಲಾಗುತ್ತಿದೆ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಗ್ವಿ ಹೇಳಿದ್ದಾರೆ.
ನ್ಯೂಯಾರ್ಕಿನ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ, ಕ್ಯಾನ್ಸರ್ ಚಿಕಿತ್ಸೆ ತಜ್ಞ ಡಾ. ದತ್ತಾತ್ರೇಯುಡು ನೋರಿ ಅವರು ಸೋನಿಯಾ ಗಾಂಧಿಗೆ ಆಗಸ್ಟ್ 4ರಂದು ಶಸ್ತ್ರಚಿಕಿತ್ಸೆ ಮಾಡಿದ್ದರು. ದತ್ತಾತ್ರೇಯುಡು ಕರ್ನೂಲು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಮಹಿಳೆಯರ ಕ್ಯಾನ್ಸರ್ ವಿಷಯದಲ್ಲಿ ಅವರು ಪರಿಣತರು.