ಚಳವಳಿಯಲ್ಲಿ ಎಲ್ಲರೂ ಇದ್ದಾರೆ, ಸರಕಾರಿ ನೌಕರರನ್ನು ಬಿಟ್ಟು

ಅವರಾದರೂ ಯಾಕೆ ಬರ್ತಾರೆ ಹೇಳಿ? ಎಂದು ಸರಕಾರಿ ಕಚೇರಿಗಳಿಗೆ ಅಲೆದು ಬಳಲಿ ಬೆಂಡಾಗಿರುವವರು ವ್ಯಂಗ್ಯ ನುಡಿಯಬಹುದು. ಇದರ ಅರ್ಥ ಸರಕಾರಿ ಕಚೇರಿಗಳಲ್ಲಿ ಭ್ರಷ್ಟ ವಿರೋಧಿಗಳೇ ಇಲ್ಲವೆ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. 'ಯಾರಿಗೂ ಲಂಚ ನೀಡಬೇಡಿ' ಎಂಬ ಬೋರ್ಡನ್ನೇನೋ ಅನೇಕ ಕಚೇರಿಗಳಲ್ಲಿ ಹಾಕಿರುತ್ತಾರೆ. ಆದರೆ, ಅಂದರ್ ನಡೆಯುವುದೇ ಬೇರೆ ಅನ್ನುತ್ತಾರೆ ಆರ್ಟಿಓದಲ್ಲಿ ಇತ್ತೀಚೆಗೆ ಲಂಚ ಕಕ್ಕಿ ಬಂದಿರುವ ಕೆಂಗೇರಿಯ ಸದಾಶಿವ ಅವರು.
ಫ್ರೀಡಂ ಪಾರ್ಕಿನಲ್ಲಿ ಮಾತ್ರ ಭ್ರಷ್ಟಾಚಾರದ ವಿರುದ್ಧ ಹಾರಾಟ ಕೂಗಾಟಗಳೆಲ್ಲ. ಒಂದು ಬಾರಿ ಸರಕಾರಿ ಕಚೇರಿ ಒಳಗೆ ಹೊಕ್ಕರೆ ಸನ್ನಿವೇಶವೇ ಬದಲಾಗುತ್ತದೆ. ತಮ್ಮ ಆದಷ್ಟು ಬೇಗ ಕೆಲಸ ಆದರೆ ಸಾಕು ಎಂದು ಜವಾನನಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಭ್ರಷ್ಟರೆಲ್ಲ ಕೇಳಿದಷ್ಟು ಹಣ ಇಕ್ಕಿ ಬಂದಿರುತ್ತೇವೆ. ಇದು ಬದಲಾಗಬೇಕಿದ್ದರೆ 'ನಾನೊಬ್ಬ ಲಂಚ ನೀಡಿದರೆ ಅಥವಾ ನೀಡದಿದ್ದರೆ ವ್ಯವಸ್ಥೆ ಹೇಗೆ ಸುಧಾರಿಸುತ್ತದೆ' ಎಂಬ ಧೋರಣೆ ಬದಲಾಗಬೇಕು ಎಂಬುದು ಫ್ರೀಡಂ ಪಾರ್ಕಿಗೆ ಇಂದು ಹೋಗಿ ಬಂದಿರುವ ಜಯನಗರದ ಶ್ರೀಧರ್ ಅವರ ಖಚಿತ ಅಭಿಪ್ರಾಯ.
ಅಣ್ಣಾ ಚಳವಳಿ ತಣ್ಣಗಾದರೆ ಎಳೆದ ರಬ್ಬರ್ ಬಿಟ್ಟ ನಂತರ ಯಥಾಸ್ಥಿತಿಗೆ ಬಂದಂತೆ ಭ್ರಷ್ಟಾಚಾರದ ಬಗೆಗಿನ ಜನರ ಧೋರಣೆಯೂ ಮೊದಲಿನ ಸ್ಥಿತಿಗೇ ತಲುಪುತ್ತದೆ ಎಂಬುದು ಭೈರಸಂದ್ರದ ಬಾಬಣ್ಣ ಅವರ ನಿರಾಶಾದಾಯಕ ಪ್ರತಿಕ್ರಿಯೆ. ಆದರೆ, ಈ ಆಂದೋಲನದಿಂದ ತುಸುಮಟ್ಟಿಗಾದರೂ ಜನರ ಮನೋಧರ್ಮ ಬದಲಾಗಬಹುದು, ಈ ಕ್ರಾಂತಿ ಫಲ ನೀಡಲೂಬಹುದು ಎಂಬ ಆಶಾಭಾವನೆಯನ್ನೂ ಅವರು ಹೊಂದಿದ್ದಾರೆ.












Click it and Unblock the Notifications