ಅಣ್ಣಾ ಹಜಾರೆಗೆ 7 ದಿನ ಜೈಲು, ತಿಹಾರ್ ಜೈಲಿಗೆ ಭರ್ತಿ
'ನಾನು ಸಹಿ ಹಾಕಲಾರೆ. ಜೈಲಿಗೆ ಹೋಗಲು ಸಿದ್ಧ' ಎಂದು ಮ್ಯಾಜಿಸ್ಟ್ರೇಟ್ ವಿಶೇಷ ನ್ಯಾಯಾಧೀಶರಿಗೆ ಅಣ್ಣಾ ತಿಳಿಸಿದರು. ಹೀಗಾಗಿ, ಆಣ್ಣಾ ಜತೆಗೆ ಅವರ ಐದು ಸಹಚರರನ್ನೂ ಜೈಲಿಗೆ ಕಳಿಸಲಾಗಿದೆ. ನಿಷೇದಾಜ್ಞೆಯನ್ನು ಉಲ್ಲಂಘಿಸುವುದಿಲ್ಲ ಎಂಬ ಷರತ್ತು ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ ಕಾರಣ ಆಣ್ಣಾಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಣ್ಣಾರನ್ನು ಕೊಠಡಿ ಸಂಖ್ಯೆ 4ರಲ್ಲಿ ಸುರೇಶ್ ಕಲ್ಮಾಡಿ ಜತೆಗೂ ಅರವಿಂದ್ ಕೇಜ್ರಿವಾಲ ಅವರನ್ನು ಕೊಠಡಿ ಸಂಖ್ಯೆ 1ರಲ್ಲಿ ಮಾಜಿ ಸಚಿವ ಎ. ರಾಜಾ ಜತೆಗೂ ಬಂಧನದಲ್ಲಿಡಲಾಗುವುದು ಎಂದು ತಿಹಾರ್ ಜೈಲು ಅಧೀಕ್ಷಕರು ತಿಳಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಉಪವಾಸಕ್ಕೆ ಕುಳಿತುಕೊಳ್ಳಲು ಸಜ್ಜಾಗುತ್ತಿದ್ದ ಅಣ್ಣಾ ಹಜಾರೆ ಅವರನ್ನು ಮಂಗಳವಾರ ಬೆಳಗ್ಗೆ ದೆಹಲಿ ಪೊಲೀಸರು ಅವರ ಮನೆಯಲ್ಲೇ ಬಂಧಿಸಿದ್ದರು. ಸರಕಾರದ ಜನ ಲೋಕಪಾಲ ಮಸೂದೆ ವಿರೋಧಿಸಿ ಜೆಪಿ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಹೊರಟು ನಿಂತಾಗ ಅಣ್ಣಾ, ಕೇಜ್ರಿವಾಲಾ ಮತ್ತಿತರ ಹೋರಾಟಗರರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಇದಕ್ಕೂ ಮೊದಲು ಬಂಧನಕ್ಕೀಡಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನೂ ಸಹ ತಿಹಾರ್ ಜೈಲಿಗೆ ರವಾನಿಸಲಾಗಿದೆ.