ಲೋಕಾಯುಕ್ತ ವರದಿಗೆ ತಲೆಬಾಗುವರೆ ಯಡಿಯೂರಪ್ಪ?

ಜುಲೈ 20ರಂದು ಸೋರಿಕೆಯಾದ ವರದಿಯಲ್ಲಿದ್ದಂತೆ ಘಟಾನುಘಟಿಗಳು ಗಣಿಗಾರಿಕೆಯಲ್ಲಿ ಅಕ್ರಮ ನಡೆಸಿರುವುದು ನಿಜವಾಗಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ವಿ ಸೋಮಣ್ಣ, ಕೂಡ್ಲಿಗಿ ಶಾಸಕ ನಾಗೇಂದ್ರ, ಶ್ರೀರಾಮುಲು ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮತ್ತು ಲಾಡ್ ಹೆಂಡತಿ ಹೆಸರುಗಳು ಬಹಿರಂಗವಾಗಿವೆ.
ಎಷ್ಟು ಕಂಪನಿಗಳು ಭಾಗಿಯಾಗಿವೆ, ಅವುಗಳಿಂದ ಎಷ್ಟು ನಷ್ಟವಾಗಿದೆ, ಯಾರ್ಯಾರಿಗೆ ಎಷ್ಟೆಷ್ಟು ಸಂದಾಯವಾಗಿದೆ. ಯಾರಿಂದ ಎಷ್ಟು ವಸೂಲಿ ಮಾಡಬೇಕು ಎಂಬ ವಿವರಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು. ದೂರವಾಣಿ ಕದ್ದಾಲಿಕೆ ಮಾಡಿದ್ದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. 787 ಅಧಿಕಾರಿಗಳು ಭಾಗಿಯಾಗಿರುವುದರಿಂದ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.
ಎರಡು ಕೋಟಿ ರು.ಗೆ ಜಮೀನನ್ನು ಖರೀದಿಸಿದ್ದ ಯಡಿಯೂರಪ್ಪ ಕುಟುಂಬ ಗಣಿಗಾರಿಕೆ ಕಂಪನಿಗಳಿಗೆ ಅದೇ ಜಮೀನನ್ನು 20 ಕೋಟಿ ರು. ಭಾರೀ ಮೊತ್ತಕ್ಕೆ ಮಾರಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಮೊತ್ತವನ್ನು ಚೆಕ್ ಮೂಲಕ ಸಂದಾಯವಾಗಿದೆ.
ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಅಧಿಕಾರವಿರುವುದರಿಂದ ಅವರಿಗೆ ಒಂದು ಪ್ರತಿಯನ್ನು ಸಲ್ಲಿಸಿರುವುದಾಗಿ ಅವರು ಹೇಳಿದರು. ಆದರೆ, ಮುಖ್ಯಮಂತ್ರಿ ಅಥವಾ ಇತರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಪಷ್ಟವಾಗಿ ವರದಿಯಲ್ಲಿ ನಮೂದಿಸಿಲ್ಲ. ತಮಗೆ ವರದಿಯ ಪ್ರತಿ ಬಂದರೆ ಮುಖ್ಯಮಂತ್ರಿ ವಿರುದ್ಧ ಕ್ರಮ ಜರುಗಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಹಂಸರಾಜ್ ಭಾರದ್ವಾಜ್ ಹೇಳಿದ್ದರು. ಈಗ ದಾಳ ಹಾಕುವ ಸರದಿ ಭಾರದ್ವಾಜ್ ಅವರದು.
ವರದಿ ಬಹಿರಂಗವಾಗುತ್ತಿದ್ದಂತೆ ವಿಶೇಷ ವಿಮಾನದ ಮುಖಾಂತರ ಯಡಿಯೂರಪ್ಪನವರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ದೌಡಾಯಿಸಿದ್ದಾರೆ. ಬಿಜೆಪಿ ವರಿಷ್ಠರ ಸಭೆ ಕೂಡ ಆರಂಭವಾಗಿದ್ದು, ಕರ್ನಾಟಕ ಬಿಜೆಪಿ ಸರಕಾರದ ಹಣೆಬರಹ ತಿಳಿದುಬರಲಿದೆ.












Click it and Unblock the Notifications