ಅಜಾತಶತ್ರು ಕೃಷ್ಣ ಅಯ್ಯರ್ ನಿಧನಕ್ಕೆ ದೇವೇಗೌಡರ ಕಂಬನಿ
ಇಂದು ವಿಧಿವಶರಾದ ಮಾಜಿ ಸಂಸದ ವಿಎಸ್ ಕೃಷ್ಣ ಅಯ್ಯರ್ ಅವರ ಅಂತಿಮ ದರ್ಶನ ಪಡೆಯಲು ದೇವೇಗೌಡ ಸಮೇತ ಅನೇಕ ಮುಖಂಡರು ತೆರಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ, ರಾಜಕೀಯ ಮುತ್ಸದ್ಧಿ ಆಗಿದ್ದ ವಿ.ಎಸ್.ಕೃಷ್ಣ ಅಯ್ಯರ್ ಅವರು ಇಂದು(ಜು.25) ಮುಂಜಾನೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಯ್ಯರ್ ಅವರಿಗೆ 89 ವರ್ಷ ವಯಸ್ಸಾಗಿತ್ತು.ಅಯ್ಯರ್ ಅವರ ಪಾರ್ಥೀವ ಶರೀರವನ್ನು ಅವರ ಚಾಮರಾಜಪೇಟೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.
1962-63 ರಲ್ಲಿ ಬೆಂಗಳೂರಿನ ಮೇಯರ್ ಆಗಿದ್ದ ಅಯ್ಯರ್ ಅವರು 1984 ರಲ್ಲಿ ಲೋಕಸಭೆ ಪ್ರವೇಶಿಸಿದ್ದರು. ಎಲ್ಲಾ ಪಕ್ಷದವರ ಗೌರವಾದರಗಳಿಗೆ ಪಾತ್ರರಾಗಿದ್ದ ಅಯ್ಯರ್ ಅವರು ಮಾದರಿ ರಾಜಕಾರಣಿಯಾಗಿದ್ದರು.
ಕಳೆದ ಜನವರಿ 7 ರಂದು ನಗರದ ಮಾಸ್ತಿ ರಂಗಮಂದಿರದಲ್ಲಿ ಅಯ್ಯರ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದನ್ನು ಅವರ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಾರೆ. ಎಂವಿ ರಾಜಶೇಖರನ್, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್ ಸೇರಿದಂತೆ ಹಲವು ನಾಯಕರು ಅಂದು ಅಲ್ಲಿ ಸಂತೋಷದ ಕ್ಷಣಗಳನ್ನು ಕಂಡಿದ್ದರು.
ಬಿಡುವಿಲ್ಲದೆ ರಾಜಕೀಯ ಜಂಜಾಟದ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಂತಾಪ ಸಂದೇಶವನ್ನು ಕಳಿಸಿದ್ದಾರೆ. ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಹಲವು ನಾಯಕರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು