ರೈಲ್ವೆ ಸ್ಟೇಷನ್ ಮಾಸ್ಟರುಗಳ ಗೋಳು ನೀವೂ ಸ್ವಲ್ಪ ಕೇಳಿ!

ಆರನೇ ವೇತನ ಆಯೋಗವು ನೀಡಿದ ವರದಿಯಲ್ಲಿ ಸ್ಟೇಷನ್ ಮಾಸ್ಟರ್ ಗಳಿಗೆ ಶಿಫಾರಸು ಮಾಡಿದ್ದ ವೇತನದ ಪ್ರಮಾಣ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿಯು ಮೂಲ ವೇತನದಲ್ಲಿ ಮಾಸಿಕ 4,200 ರೂಪಾಯಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಆ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ ಎಂದು ಧರಣಿನಿರತರು ದೂರಿದರು.
'ರೈಲ್ವೆ ಸ್ಟೇಷನ್ ಮಾಸ್ಟರ್ ಗಳ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ವೇತನ ಹೆಚ್ಚಳ ಮಾಡಲು ರೈಲ್ವೆ ಮಂಡಳಿಯೂ ಒಪ್ಪಿಕೊಂಡಿದೆ. ಆದರೆ ಹಣಕಾಸು ಇಲಾಖೆಯು ವೇತನ ಹೆಚ್ಚಳ ಮಾಡಲು ವಿಳಂಬ ಮಾಡುತ್ತಿದೆ' ಎಂದು ನೈರುತ್ಯ ರೈಲ್ವೆ ಮಜ್ದೂರ್ ಸಂಘದ ವಿಭಾಗೀಯ ಅಧ್ಯಕ್ಷ ಕೆ.ಎನ್.ರಾವ್ ಆರೋಪಿಸಿದರು.
ಇಲಾಖೆಯಿಂದ ನೀಡುತ್ತಿರುವ ಸಮವಸ್ತ್ರಗಳ ಗುಣಮಟ್ಟ ಚೆನ್ನಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮವಸ್ತ್ರಕ್ಕೆ ಬದಲಾಗಿ ಎರಡು ವರ್ಷಕ್ಕೊಮ್ಮೆ ಸಮವಸ್ತ್ರ ಖರೀದಿಸಲು ಮೂರು ಸಾವಿರ ರೂಪಾಯಿ ಹಣ ಕೊಡಬೇಕು. ಸ್ಟೇಷನ್ ಮಾಸ್ಟರ್ ಗಳ ಮೂಲ ವೇತನಕ್ಕೆ ಅನುಗುಣವಾಗಿ ಮಾಸಿಕ ಶೇ 30ರಷ್ಟು ಸುರಕ್ಷತಾ ಭತ್ಯೆ ನೀಡಬೇಕು. ಸ್ಟೇಷನ್ ಮಾಸ್ಟರ್ ಗಳ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಗೆ ನಿಗದಿಪಡಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಎಐಎಸ್ಎಂಎ ವಿಭಾಗೀಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ಟಿ.ನೆಡುಮಾರನ್, ನೈರುತ್ಯ ರೈಲ್ವೆ ಮಜ್ದೂರ್ ಸಂಘದ ವಿಭಾಗೀಯ ಸಹ ಕಾರ್ಯದರ್ಶಿ ಕುಮಾರಸ್ವಾಮಿ ಧರಣಿಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications