'ಅನಂತ' ದೇಗುಲ ನಿಧಿ ಬೆಳಕಿಗೆ ಬರಲು ಕಾರಣವೇನು?

ಟಿ.ಪಿ. ಸುಂದರರಾಜನ್ ಎಂಬ ವಕೀಲರು ಈ ದೇವಸ್ಥಾನದ ಆಸ್ತಿ ದುರ್ಬಳಕೆ ಆಗುತ್ತಿದೆ ಎಂದು ಕೋರ್ಟ್ ಮೊರೆಹೋಗಿದ್ದರು. ಆಗ ನೆಲಮಾಳಿಗೆಯನ್ನು ತೆರೆದು ಒಳಗೇನಿದೆಯೋ ಪರಿಶೋಧಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಅದರಂತೆ ಈಗ ಶೋಧ ಕಾರ್ಯ ಆರಂಭವಾಗಿದೆ ಎಂದು ಸರಳವಾಗಿ ಹೇಳಬಹುದು.
ಅದಕ್ಕೂ ಮುನ್ನ 2007ರಲ್ಲಿ ಏನಾಗಿತ್ತೆಂದರೆ... ಮಾರ್ತಾಂಡ ವರ್ಮಾ ನೇತೃತ್ವದ ದೇವಸ್ಥಾನದ ಟ್ರಸ್ಟ್ ಸದಸ್ಯರು ನೆಲಮಾಳಿಗೆಯನ್ನು ತೆರೆದು ನಿಧಿಗಳ ಫೋಟೋ ತೆಗೆದು ಆಲ್ಬಂ ತಯಾರಿಸಲು ನಿರ್ಧರಿಸಿದ್ದರು. ಟ್ರಸ್ಟ್ ಸೂಚನೆಯಂತೆ ಗ್ಯಾಸ್ ಕಟ್ಟರ್ ಬಳಸಿ ಶತಮಾನಗಳಿಂದ ಮುಚ್ಚಿಡಲಾದ ನೆಲಮಾಳಿಗೆಯ ಬಾಗಿಲನ್ನು ಒಡೆದು ಸುರಂಗ ಮಾರ್ಗದಲ್ಲಿ ಒಳಗಿನ ಗುಹೆಗೆ ಇಳಿದಾಗ ಯಾವುದೇ ನಿಧಿ ಕಾಣಿಸಿರಲಿಲ್ಲ. ಕೇವಲ ಕಲ್ಲು ಮಣ್ಣು ತುಂಬಿತ್ತು. ಗುಪ್ತ ನಿಧಿ ಅಂಥಹುದೇನೂ ಇಲ್ಲವೆಂದು ಟ್ರಸ್ಟ್ ಸದಸ್ಯರು ಸುಮ್ಮನಾದರು.
ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. 2007ರ ಆಗಸ್ಟ್ 3ರಂದು ಈ ಕುರಿತು ದೇವಸ್ಥಾನದ ಎಕ್ಸಿಕ್ಯೂಟಿವ್ ಅಧಿಕಾರಿ ಮಾರ್ತಾಂಡ ವರ್ಮಾ ಒಂದು ಸರ್ಕ್ಯುಲರ್ ಹೊರಡಿಸಿ, ಇದೆಲ್ಲ ಟ್ರಸ್ಟ್ ನ ಹಕ್ಕು ಎಂದು ಪ್ರತಿಪಾದಿಸಿದರು. ಆದರೆ ಇದರ ವಿರುದ್ಧ ಸುಂದರರಾಜನ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಆಗ 2007ರ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ನ್ಯಾಯಾಲಯ ಸರ್ಕ್ಯುಲರ್ ಕ್ರಮಕ್ಕೆ ತಡೆಯಾಜ್ಞೆ ನೀಡಿತು.
ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮರ್ತಾಂಡ ವರ್ಮರಿಂದಾಗಿ ಕ್ಷೇತ್ರಾಡಳಿತ ಟ್ರಸ್ಟ್ ಅಧೀನದಲ್ಲೇ ಉಳಿಯಿತು. ಆದರೆ ದೇವಸ್ಥಾನದ ವ್ಯಾಪ್ತಿಯಲ್ಲಿರುವ ನಿಧಿಯ ಗಣತಿ ನಡೆಸುವಂತೆ ಕೋರ್ಟ್ ಆದೇಶಿಸಿತು.
ಸುಪ್ರೀಂಕೋರ್ಟ್ ನಿಯೋಜಿಸಿದ ಆಯೋಗದ ಸದಸ್ಯರು ನೆಲಮಾಳಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಆ ಸಂದರ್ಭದಲ್ಲಿ ಚಪ್ಪಡಿಯಾಕಾರದ ಕಗ್ಗಲ್ಲನ್ನು ಕಂಡು ಕುತೂಹಲಗೊಂಡ ಸದಸ್ಯರು ಅದನ್ನು ಸರಿಸಿದಾಗ ಕಿರಿದಾದ ಸುರಂಗ ಮಾರ್ಗ ಕಾಣಿಸಿಕೊಂಡಿತು. ಆ ಮಾರ್ಗವಾಗಿ ಇಳಿದುಹೋದಾಗ ಈ ಮಹಾ ಸಂಪತ್ತು ಬೆಳಕಿಗೆ ಬಂದಿದೆ.
ನೆಲಮಾಳಿಗೆಯಲ್ಲಿ ಒಟ್ಟು 6 ಕೊಠಡಿಗಳಿದ್ದು, 20 ಅಡಿಗೂ ಹೆಚ್ಚು ಆಳದಲ್ಲಿ ಸಂತ್ತನ್ನು ಹುದುಗಿಡಿಸಲಾಗಿದೆ. ಎ, ಬಿ, ಸಿ, ಡಿ ಮತ್ತು ಇ ಎಂದು ಕೊಠಡಿಗಳಿಗೆ ನಾಮಕರಣ ಮಾಡಲಾಗಿದೆ. ಇದುವರೆಗೆ ಐದು ಕೊಠಡಿಗಳ ತಲಾಶೆ ನಡೆದಿದೆ. ಜುಲೈ 10ರೊಳಗಾಗಿ ಸಂಪೂರ್ಣ ಶೋಧ ಕಾರ್ಯ ಮುಕ್ತಾಯವಾಗುವ ಅಂದಾಜಿದೆ.
ಈ ಮಧ್ಯೆ, ನೆಲ ಮಾಳಿಗೆಗೆ ಕಾಂಕ್ರೀಟ್ ಮಾಡಲು ತೀರ್ಮಾನಿಸಲಾಗಿದೆ. ಸುರಂಗ ಮಾರ್ಗದ ಮೂಲಕ ಮೇಲಿನ ದೇವಸ್ಥಾನಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಇದರ ಜತೆಗೆ ನೆಲಮಾಳಿಗೆಯೊಳಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಅಂತಿಮವಾಘಿ ಅಷ್ಟೂ ನಿಧಿನ್ನು ಆಯಾ ನೆಲ ಮಾಳಿಗೆಗಳ ಒಳಗಡೆಯೇ ಸಂರಕ್ಷಿಸಿಡಲು ತೀರ್ಮಾನಿಸಲಾಗಿದೆ.












Click it and Unblock the Notifications