ಬಾಬಾ ಮನವೊಲಿಕೆಗೆ ರವಿಶಂಕರ್ ಗುರೂಜಿ ಯತ್ನ
ಸಾವಕಾಶವಾಗಿ ಚೇತರಿಸಿಕೊಳ್ಳುತ್ತಿರುವ ಬಾಬಾರನ್ನು ಭೇಟಿ ಮಾಡಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗುರೂಜಿ, ನಾನು ಕೇಂದ್ರದ ರಾಯಭಾರಿಯಾಗಿ ಬಂದಿಲ್ಲ, ಸ್ವಯಂಪ್ರೇರಿತವಾಗಿ ಬಾಬಾರನ್ನು ಭೇಟಿಯಾಗಲು ಬಂದಿದ್ದೇನೆ. ಬಾಬಾರನ್ನು ಮನವೊಲಿಸಿಯೇ ಬೆಂಗಳೂರಿಗೆ ಮರಳುತ್ತೇನೆ ಎಂದು ವಿಶ್ವಾಸದಿಂದ ನುಡಿದರು.
ಬಾಬಾ ಅವರು ಆರೋಗ್ಯದಿಂದಿರುವುದು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೂ ಅಗತ್ಯ. ಈ ಕಾರಣ ಉಪವಾಸ ಕೈಬಿಡಲು ಅವರಿಗೆ ಕೇಳಿಕೊಂಡಿದ್ದೇನೆ. ವೈದ್ಯರು ಅವರನ್ನು ತುಂಬಾ ನಿಗಾವಹಿಸಿ ನೋಡಿಕೊಳ್ಳುತ್ತಿದ್ದಾರೆ. ಉಪವಾಸ ಕೈಬಿಡುವರೆಂಬ ವಿಶ್ವಾಸವಿದೆ ಎಂದು ಗುರೂಜಿ ಹೇಳಿದರು.
ಬಾಬಾ ಅವರ ರಕ್ತದೊತ್ತಡ ಇನ್ನೂ ತಹಬದಿಗೆ ಬಂದಿಲ್ಲ. ಹೃದಯದ ಬಡಿತ ಕೂಡ ಏರುಪೇರಾಗುತ್ತಿದೆ. ಆದರೆ, ಮೂತ್ರಪಿಂಡ ಮತ್ತು ಯಕೃತ್ತು ಸಹಜವಾಗಿ ಕಾರ್ಯ ನಿರ್ವಹಿಸುತ್ತಿವೆ. ತುಂಬಾ ಅಶಕ್ತರಾಗಿರುವ ಬಾಬಾ ಅವರಿಗೆ ಕೂಡಲು ಮತ್ತು ಮಾತನಾಡಲೂ ಆಗುತ್ತಿಲ್ಲ. ಅವರನ್ನು ಐಸಿಯುನಿಂದ ಹೊರತಂದಿದ್ದು, ವಿಐಪಿ ಕೋಣೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಡಾ. ದೀಪಕ್ ಗೋಯೆಲ್ ಹೇಳಿದ್ದಾರೆ.
ಬಾಬಾ ರಾಮದೇವ್ ಅವರ ಆರೋಗ್ಯ ತೀರ ಹದಗೆಟ್ಟಿದ್ದರಿಂದ ಅವರನ್ನು ಹರಿದ್ವಾರದಿಂದ ಬಲವಂತವಾಗಿ ಹಿಮಾಲಯನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭ್ರಷ್ಟಾಚಾರವನ್ನು ನಿಗ್ರಹಿಸಬೇಕು ಮತ್ತು ಕಪ್ಪು ಹಣವನ್ನು ವಿದೇಶಿ ಬ್ಯಾಂಕುಗಳಿಂದ ಹೊರತರಬೇಕು ಎಂಬ ಬಾಬಾ ಅವರ ಆಗ್ರಹಕ್ಕೆ ಕೇಂದ್ರ ಸರಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಬಾಬಾ ಬೆಂಬಲಿಗರು ಹರಿದ್ವಾರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.