ಅಪಹರಿಸಲಾದ ಸೀತೆಯನ್ನು ವಾಪಸ್ ತರಬೇಕು : ಪೇಜಾವರಶ್ರೀ
ರಾಮಲೀಲಾ ಮೈದಾನದಲ್ಲಿ ತಮ್ಮ ಸಹಚರರೊಡನೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಶನಿವಾರ, ಜೂ.4ರ ಬೆಳಗಿನಿಂದ ಆರಂಭಿಸಿರುವ ಬಾಬಾ ರಾಮದೇವ್ ಅವರನ್ನು ಇಂದು ಭೇಟಿ ಮಾಡಿದ ಪೇಜಾವರ ಶ್ರೀಗಳು ದೇಶದ ದಾರಿದ್ರ್ಯವನ್ನು ಹೊಡೆದೋಡಿಸಲಿ ಇಂತಹ ಹೋರಾಟದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸೀತೆಯ ಪ್ರತೀಕವಾಗಿರುವ ಭಾರತದ ಅಮೂಲ್ಯ ಆಸ್ತಿ(ಕಪ್ಪು ಹಣ)ಯನ್ನು ವಿದೇಶಕ್ಕೆ ಅಪಹರಿಸಲಾಗಿದೆ. ಆ ಸೀತೆಯನ್ನು ಜೋಪಾನವಾಗಿ ಭಾರತಕ್ಕೆ ವಾಪಸ್ ಕರೆತರುವ ಜವಾಬ್ದಾರಿ ರಾಜಕಾರಣಿಗಳ ಮೇಲಿದೆ ಎಂದು ಪೇಜಾವರ ಶ್ರೀಗಳು ಮಾರ್ಮಿಕವಾಗಿ ನುಡಿದರು.
ಸರಕಾರದ ಜೊತೆ ಹೋರಾಟ ಮಾಡಿಯಾದರೂ ಈ ಹಣವನ್ನು ವಾಪಸ್ ತರಲೇಬೇಕು ಎಂದು ಅವರು, ದೇಶದ ದಾರಿದ್ರ್ಯ ಪರಿಹಾರಕ್ಕೆ ಇಂತಹ ಹೋರಾಟಗಳು ಅಗತ್ಯವಿವೆ. ನೈತಿಕತೆಯನ್ನು ಜಾಗೃತಗೊಳಿಸುವ ಮಹತ್ವದ ಹೋರಾಟ ಇದಾಗಿದೆ ಎಂದು ಅವರು ನುಡಿದರು. ಬಾಬಾ ರಾಮದೇವ್ ಅವರ ಹೋರಾಟಕ್ಕೆ ಎಲ್ಲ ಧಾರ್ಮಿಕ ಗುರುಗಳು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಪವಾಸ ಮಾಡುತ್ತಿರುವ ರಾಮಲೀಲಾ ಮೈದಾನದಲ್ಲಿ ಬಾಬಾ ರಾಮದೇವ ಅವರ ಉಪಸ್ಥಿತಿಯಿಂದಾಗಿ ಯೋಗ, ಭಜನೆ, ಭಕ್ತಿ ಗೀತೆ, ರಾಷ್ಟ್ರಪ್ರೇಮದ ಗೀತೆಗಳು ಅವ್ಯಾಹತವಾಗಿ ಸಾಗುತ್ತಿವೆ. ಬಾಬಾಗೆ ಬೆಂಬಲ ಸೂಚಿಸಿ ಸಾವಿರಾರು ಜನರು ಅಲ್ಲಿ ಜಮಾಯಿಸಿದ್ದಾರೆ. ಅವರಿಗೆಲ್ಲ ನೀರು, ಊಟದ ಮತ್ತಿತರ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗಿದೆ.