ಆಸ್ತಿ ಜಗಳ: ಸುಳ್ಯ ರಾಮಕೃಷ್ಣ ಕೊಲೆ ರಹಸ್ಯ ಬಯಲು

ಕರಾವಳಿ ಭಾಗದಲ್ಲಿ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತು. ಸಂಸ್ಥೆಯ ಸ್ಥಾಪಕ ಕುರುಂಜಿ ವೆಂಕಟರಮಣ ಗೌಡ ಅವರ ಕಿರಿಯ ಪುತ್ರ ಡಾ. ರೇಣುಕಾ ಪ್ರಸಾದ್ ಕೊಲೆ ಪ್ರಕರಣದ ಪ್ರಮುಖ ಆರೋಪಿ.
ಏಪ್ರಿಲ್ 28ರಂದು ರಾತ್ರಿ ವಾಯುವಿಹಾರ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ರಾಮಕೃಷ್ಣ ಅವರನ್ನು ಹಂತಕರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಡಾ. ರೇಣುಕಾ ಪ್ರಸಾದ್ (50), ಸಕಲೇಶಪುರದ ನಾಗೇಶ್ (28), ವಿಟ್ಲ ಅಳಿಕೆಯ ಮನೋಜ್ (32), ಮಂಗಳೂರಿನ ಆಕಾಶ ಭವನದ ಶರಣ್ (28) ಮತ್ತು ಬಜಾಲ್ನ ಶಂಕರ್ ಯಾನೆ ಭವಾನಿ ಶಂಕರ್ (29) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪೊಳಲಿಯ ವಾಮನ ತಲೆ ಮರೆಸಿಕೊಂಡಿದ್ದಾನೆ.
ಸುಳ್ಯದ ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳನ್ನು ಅಣ್ಣ ತಮ್ಮಂದಿರಿಗೆ ಪಾಲು ಮಾಡಿದ್ದ ವಿಚಾರದಲ್ಲಿ ತನಗೆ ಅನ್ಯಾಯವಾಗಿದೆ ಅಸಮಾಧಾನಗೊಂಡಿದ್ದ ರೇಣುಕಾ ಪ್ರಸಾದ್, ಇದಕ್ಕೆ ಆಡಳಿತಾಧಿಕಾರಿ ರಾಮಕೃಷ್ಣ ಅವರೇ ಕಾರಣ ಎಂದು ಭಾವಿಸಿದ್ದ. ಜತೆಗೆ ಸೋದರರ ನಡುವಿನ ವಿರಸಕ್ಕೂ ರಾಮಕೃಷ್ಣ ಅವರೇ ಕಾರಣ ಎಂಬ ನಂಬಿಕೆಯೂ ಆತನಲ್ಲಿ ಮನೆಮಾಡಿತ್ತು. ಇದರಿಂದ ಕುಪಿತಗೊಂಡು ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ಪಶ್ಚಿಮ ವಲಯದ ಐಜಿಪಿ ಅಲೋಕ್ ಮೋಹನ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಮ್, ಅಡೀಶನಲ್ ಎಸ್ಪಿ ಪ್ರಭಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಾಲು ಹಂಚಿಕೆ ವಿಚಾರದಲ್ಲಿ ರೇಣುಕಾ ಪ್ರಸಾದ್ಗೆ ತೀವ್ರ ಅಸಮಾಧಾನ ಇತ್ತೆಂದು ಸುಳ್ಯದ ಜನರಿಗೆ ಗೊತ್ತಿದ್ದ ವಿಚಾರವಾಗಿತ್ತು. ಹೀಗಾಗಿ ರಾಮಕೃಷ್ಣ ಹತ್ಯೆ ಸಂಬಂಧ ರೇಣುಕಾ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸರು ಕೆವಿಜಿ ಸಂಸ್ಥೆಯ ತೋಟದ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ ಅಲ್ಲಿನ ವ್ಯವಸ್ಥಾಪಕರು ಕೂಡ ಇದೇ ರೀತಿ ಸಂದೇಹ ವ್ಯಕ್ತಪಡಿಸಿದ್ದರು. ಈ ಎರಡು ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಅಂತಿಮವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾದರು.
ಪೊಲೀಸ್ ತಂಡಕ್ಕೆ ಬಹುಮಾನ: ಆರೋಪಿಗಳನ್ನು 10 ದಿನಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಐಜಿಪಿ ಅಲೋಕ್ ಮೋಹನ್ 10,000 ರೂ. ಬಹುಮಾನ ಘೋಷಿಸಿದ್ದಾರೆ.












Click it and Unblock the Notifications