ಲಾಡೆನ್ ನಿಧನಕ್ಕೆ ಅಳಬೇಕೋ ನಗಬೇಕೋ?

ಯಾರಾದರೊಬ್ಬ ಕಿತ್ತು ಹೋಗಿರೋ ವ್ಯಕ್ತಿಗೆ ಒಂದು ಹರಿದುಹೋಗಿರುವ ಪ್ರಶಸ್ತಿ ಬಂದರೆ, ಅಭಿನಂದನೆಗಳ ಸುರಿಮಳೆಗರೆಯುವ ಈ ನಾಡಿನಲ್ಲಿ ಲಾಡೆನ್ ಸುದ್ದಿಗೆ ಅಷ್ಟಾಗಿ ಪ್ರತಿಕ್ರಿಯೆಗಳು ಬಾರದಿದ್ದುದು ಪತ್ರಕರ್ತ ಸಮುದಾಯಕ್ಕೆ ಸೋಮವಾರದ ಸುದ್ದಿ ಸೋಜಿಗವಾಗಿ ಕಂಡುಬಂತು. ಅಂದಹಾಗೆ ಬೆಂಗಳೂರಿನ ಜಯನಗರ ಸೇರಿದಂತೆ ಕರ್ನಾಟಕದ ನಾನಾ ಕಡೆಗಳಲ್ಲಿ ಸೋಮವಾರ ಸಂಜೆ ವೇಳೆಗೆ ಭಾರೀ ಮಳೆ ಸುರಿದುದರಿಂದಾಗಿ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಜನಕ್ಕೆ ತೊಂದರೆ ಉಂಟಾಯಿತು.
ರಾತ್ರಿ 2 ಗಂಟೆ ಹೊತ್ತಿಗೆ ಪತ್ರಿಕೆಯನ್ನು ಮುದ್ರಿಸಿ ಕೈತೊಳೆದುಕೊಳ್ಳುವ ಪತ್ರಿಕಾಲಯಗಳಿಗೆ ಲಾಡೆನ್ ಸುದ್ದಿ ಸೋಮವಾರದ ಎಡಿಷನ್ನುಗಳಿಗೆ ಮಿಸ್ ಆಯಿತು. ಅಮೆರಿಕಾದವರು ತಮ್ಮ ದೇಶದ ಪತ್ರಿಕೆಗಳಿಗೆ ಅನುಕೂಲವಾಗುವ ಸಮಯ ನೋಡಿಕೊಂಡು ಲಾಡೆನ್ ಅವರನ್ನು ಸಾಯಿಸಿದ್ದಾರೆ, ಸ್ವಾರ್ಥಿಗಳು. ಹಾಗಾಗಿ ಉತ್ತರ ಅಮೆರಿಕಾದ ಎಲ್ಲ ಪತ್ರಿಕೆಗಳಿಗೂ ಸೋಮವಾರ ರಸವತ್ತಾದ ಸುದ್ದಿ ಕವಳ ಸಿಕ್ಕಿತು.
ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ 8.30ಕ್ಕೆ ಅಂದರೆ ಅಮೆರಿಕಾ ಪೂರ್ವ ಕರಾವಳಿಯ ಸಮಯ ರಾತ್ರಿ 7 ಗಂಟೆಗೆ ಲಾಡೆನ್ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸುವ ಕಾರ್ಯಕ್ರಮವಿತ್ತು. ಆದರೆ ಒಬಾಮಾ ಸಾಹೇಬರು ಸ್ವಲ್ಪ ನಿಧಾನಿಸಿ ಒಂದು ಗಂಟೆ ತಡವಾಗಿ ಪ್ರಕಟಿಸಿದರು. ಬಹುಶಃ ಭಾರತ ಮತ್ತು ಪಾಕಿಸ್ತಾನದ ಕಾರ್ಪೊರೇಟ್ ಅಂಗಡಿಗಳು ಮತ್ತು ಟಿವಿ ವಾಹಿನಿಗಳು ಎದ್ದು, ಸ್ನಾನ ಮಾಡಿ ತಿಂದು ಕಚೇರಿಗಳಿಗೆ ಬರುವತನಕ ಒಬಾಮಾ ಕಾದಿದ್ದರು ಎನ್ನುವುದು ಅಮಾಯಕ ವಾಚಕ ಬಂಧುಗಳ ಅರಿವಿಗೆ ಬಾರದೇಹೋಯಿತು.
ಇದೇ ವೇಳೆ, ಲಾಡೆನ್ ಸಾವಿಗೆ ಭಾರತದ ಜನನಾಯಕರು ಎಂದು ಹೇಳಿಕೊಳ್ಳುವ ಯಾವುದೇ ಧೀಮಂತ ಲೀಡರ್ ತನ್ನ ಅಭಿಪ್ರಾಯ ಹಂಚಿಕೊಳ್ಳಲು ಮುಂದಾಗಲಿಲ್ಲ. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಾದಿಯಾಗಿ ಜಾತಿವಾದಿಗಳು, ಜಾತ್ಯತೀತವಾದಿಗಳು, ಸೋಕಾಲ್ಡ್ ಬುದ್ಧಿಜೀವಿಗಳು ಏನನ್ನೂ ತಿಳಿಸಿದೆ ಮೌನವನ್ನೇ ಸುದ್ದಿಮಾಡಿ ಬರೆಯಬೇಕೆಂದು ಮೀಡಿಯಾದವರಿಗೆ ತಿಳಿಸಿದರು. ಆದರೆ, ಗೃಹಮಂತ್ರಿ ಚಿದಂಬರಂ ಅವರು ಬೇರೆಯವರಂತೆ ವರ್ತಿಸಲಿಲ್ಲ. 9/11ರ ಸೇಡನ್ನು ಅಮೆರಿಕಾ ತೀರಿಸಿಕೊಂಡಿತು ಆದರೆ 26/11ರ ಗತಿ ಏನು ಎಂಬರ್ಥ ನೀಡುವ ಚುಟುಕಾದ ಪತ್ರಿಕಾ ಹೇಳಿಕೆ ನೀಡಿ ಆಡಳಿತ ಕಾರಿಡಾರುಗಳಿಗೆ ಸ್ವಲ್ಪ ಮರ್ಯಾದೆ ತಂದುಕೊಟ್ಟರು. ಆದರೆ, ಬಿಜೆಪಿ ಮಾತ್ರ "ಲಾಡೆನ್ ಸಾವಿನಿಂದ ತೃಪ್ತಿಯಾಗಿದೆ" ಎಂದು ಹೇಳಿ ಸಂತೃಪ್ತಿಯಾಗಿ ಮೃಷ್ಟಾನ್ನ ಭೋಜನ ಮಾಡಿದವರಂತೆ ಹೊದ್ದು ಮಲಗಿಬಿಟ್ಟಿದ್ದಾರೆ.
ನಮ್ಮ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ಲಾಡೆನ್ ಸಾವಿನ ಬಗ್ಗೆ ಕುರಿತು ಸಂತಸವನ್ನಾಗಲೀ ಅಥವಾ ದುಃಖವನ್ನಾಗಲೀ ಅಥವಾ ದಿಗ್ಭ್ರಮೆಯನ್ನಾಗಲೀ ವ್ಯಕ್ತಪಡಿಸಲಿಲ್ಲ. ಇನ್ನು, ಎಚ್ ಡಿ. ಕುಮಾರಸ್ವಾಮಿ ಅವರಿಂದ ಮೀಡಿಯಾದವರು ಪ್ರತಿಕ್ರಿಯೆ ನೀರೀಕ್ಷಿಸುವಂತಿರಲಿಲ್ಲ. ಯಾಕೆಂದರೆ ಅವರು ಈಗ ಅಮೆರಿಕಾ ಪ್ರವಾಸದ ಸಿದ್ಧತೆಯಲ್ಲಿದ್ದು ನ್ಯೂ ಜೆರ್ಸಿ ಪ್ರಾಂತ್ಯದಲ್ಲಿ ಮೇ 15ರಂದು ಜರುಗುವ, ಅಲ್ಲಿನ ಕನ್ನಡಿಗರು ಏರ್ಪಡಿಸುವ ವಸಂತೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.












Click it and Unblock the Notifications