19 ಗಣಿಗಳಿಗೆ ಬೀಗ ಜಡಿಯಲು ಸು.ಕೋರ್ಟ್ ಆದೇಶ

ಕರ್ನಾಟಕದ ಬಳ್ಳಾರಿಯಲ್ಲಿ ರಾಜಕಾರಣಿ ಮತ್ತು ಅಧಿಕಾರಿಗಳ ಸಂಪೂರ್ಣ ಸಹಕಾರದಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತನಿಖೆ ನಡೆಸಲು ನಿಯೋಜಿಸಲಾಗಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿದ ವರದಿಯ ಆಧಾರದ ಮೇಲೆ ಮುಖ್ಯ ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.
ಕರ್ನಾಟಕಕ್ಕೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಿಶ್ರಫಲ. ಒಂದೆಡೆ 19 ಗಣಿ ಕಂಪನಿಗಳು ಗಣಿಗಾರಿಕೆ ನಿಲ್ಲಿಸಬೇಕೆಂದು ಆದೇಶಿಸಿದ್ದರೆ, ಇನ್ನೊಂದೆಡೆ ಯಡಿಯೂರಪ್ಪ ಅವರ ವಿರುದ್ಧ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಈ ಆದೇಶಗಳು ಗಣಿಧಣಿಗಳಾದ ಜನಾರ್ದನ ರೆಡ್ಡಿ ಮತ್ತು ಸಹೋದರರ ಮುಖದಲ್ಲಿ ಚಿಂತೆಯ ಗೆರೆ ಮೂಡಿಸಿದ್ದರೆ, ಯಡಿಯೂರಪ್ಪನವರು ಮುಗುಳ್ನಗುವಂತೆ ಮಾಡಿದೆ.
ರೆಡ್ಡಿ ರಾಜೀನಾಮೆಗೆ ಆಗ್ರಹ : ಅಕ್ರಮ ಗಣಿಗಾರಿಕೆಯ ಕಳಂಕ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸ್ (ಎನ್ಸಿಪಿಎನ್ಆರ್) ಆಗ್ರಹಿಸಿದೆ. ಎನ್ಸಿಪಿಎನ್ಆರ್ ನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಅವರ ಬಳ್ಳಾರಿಯಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಗಣಿ ಭ್ರಷ್ಟಾಚಾರ ನಡೆದಿದೆ ಮತ್ತು ನಡೆಯುತ್ತಿದೆ. ಈ ಕುರಿತು ಲೋಕಾಯುಕ್ತ ಮತ್ತು ಸಿಇಸಿ ಎರಡೂ ತನಿಖಾ ತಂಡಗಳು ಸಮಗ್ರ ಅಧ್ಯಯನ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿವೆ. ಗಣಿ ಹಗರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಸ್ಪಷ್ಟವಾಗಿ ಕೇಳುತ್ತಿದೆ ಎಂದರು.
ಅಲ್ಲದೆ, ಯು.ವಿ. ಸಿಂಗ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಂಡೂರಿನ ರಾಮಘಡ ಗಣಿ ಪ್ರದೇಶದಲ್ಲಿ ಬಳ್ಳಾರಿ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಅವರ ಆಪ್ತ ಸಹಾಯಕ ಹೊನ್ನೂರಪ್ಪ ಮತ್ತು ಕಾರ್ಪೊರೇಟರ್ ದಿವಾಕರ ಅವರ ಹೆಸರು ದೂರಿನಲ್ಲಿ ದಾಖಲಾಗಿದ್ದವು. ಅವರ ವಿರುದ್ಧ ಸರ್ಕಾರ ಇದುವರೆಗೆ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಐ.ಜಿ. ಪುಲ್ಲಿ ಮತ್ತು ಡಿ.ಜಿ. ಚಿಕ್ಕೇರಿ ಅವರು ಉಪಸ್ಥಿತರಿದ್ದರು.











Click it and Unblock the Notifications