ಯಡ್ಡಿಗೆ ಸಂಪುಟ ವಿಸ್ತರಣೆ, ಪದತ್ಯಾಗ ಎರಡೇ ಆಯ್ಕೆ

ಉಪ ಚುನಾವಣೆಗೂ ಮುನ್ನ ಸುಮಾರು 20 ದಿನದ ಹಿಂದೆ ಭಿನ್ನಮತೀಯರ ತಂಡ ಕೈಗೊಂಡಿದ್ದ ದೆಹಲಿ ಪ್ರವಾಸ ಇದೀಗ ಫಲಪ್ರದವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಉಪಚುನಾವಣೆ ಬಳಿಕ ಪದತ್ಯಾಗ ಮಾಡುವುದಾಗಿ ಸ್ವತಃ ಯಡಿಯೂರಪ್ಪ ಅವರೇ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ವಾಗ್ದಾನ ನೀಡಿದ್ದರು ಎಂದು ಮೂಲಗಳು ಹೇಳುತ್ತಿವೆ.
ಹೈಕಮಾಂಡ್ ಗೆ ಆಗ್ರಹ:ಎಚ್ಚರ ಯಡಿಯೂರಪ್ಪ ಇದೇ ರೀತಿ ಅಂದಾ ದರ್ಬಾರ್ ನಡೆಸಿಕೊಂಡು ಹೋಗುವುದಕ್ಕೆ ಬಿಟ್ರೆ, ಮುಂದೆ ಒಂದು ದಿನ ಅವರು ಪಕ್ಷದ ಅಸ್ತಿತ್ವಕ್ಕೆ ಮುಳ್ಳಾಗುತ್ತಾರೆ. ಲಿಂಗಾಯಿತ ಸ್ವಾಮಿಗಳನ್ನು ಓಲೈಸಿಕೊಂಡು ಆ ಸಮಾಜದ ಮತಗಳು ಯಾವುದೇ ಸಂದರ್ಭದಲ್ಲಿ ತನ್ನ ಕೈತಪ್ಪದಂತೆ ಮಾಡುವುದು ಅವರ ತಂತ್ರ. ಮಾಧ್ಯಮಗಳ ವರದಿಯಂತೆ ಹೊಸ ಪ್ರಾದೇಶಿಕ ಪಕ್ಷ ಕೂಡಾ ಕಟ್ಟುವ ಚಿಂತನೆ ನಡೆಸಿದ್ದಾರೆ. ಇನ್ನು ವಿಳಂಬ ಮಾಡಿದರೆ ಯಡಿಯೂರಪ್ಪ ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಗೆ ರೆಡ್ಡಿ, ಶೆಟ್ಟರ್, ಅನಂತ್, ಈಶ್ವರಪ್ಪ ಬಳಗ ಆಗ್ರಹಿಸಿದ್ದಾರೆ.
ವಿದೇಶಿ ಪ್ರವಾಸ ಮಾಡಿ ಬಂದಿರುವ ಜನಾರ್ದನ ರೆಡ್ಡಿ, ಭಿನ್ನಮತೀಯರ ತುರ್ತು ಸಭೆಗೆ ತಡವಾಗಿ ಸೇರಿಕೊಳ್ಳುವ ಸಾಧ್ಯತೆಯಿದೆ. ಶೆಟ್ಟರ್ ಅವರು ಕ್ಷೇತ್ರ ಪ್ರವಾಸ ಎಂದು ಹುಬ್ಬಳ್ಳಿ ಸೇರಿದ್ದಾರೆ. ಅವರದ್ದು ಏನಿದ್ದರೂ ತೆರೆಮರೆ ಬೆಂಬಲ ಹಾಗಾಗಿ ಭಿನ್ನ ಶಾಸಕರು, ಸಚಿವರಿಗೆ ಮತ್ತೊಮ್ಮೆ ರೆಡ್ಡಿಗಳ ನಾಯಕತ್ವದಲ್ಲಿ ಕರ್ನಾಟಕ ರಾಜಕೀಯ ಭವಿಷ್ಯದ ಮಹತ್ವದ ಚಿಂತನೆ, ಹೋರಾಟದ ರೂಪುರೇಷೆ ಸಿದ್ಧಗೊಳ್ಳುತ್ತಿದೆ.
ಆದರೆ, ಯಾವುದೇ ಒತ್ತಡಕ್ಕೂ ಮಣಿಯದ ಹೆಬ್ಬಂಡೆಯಂತಿರುವ ಯಡಿಯೂರಪ್ಪ ಅವರಿಗೆ ನಿತಿನ್ ಗಡ್ಕರಿ ಅವರ ಶ್ರೀರಕ್ಷೆ ಸಿಕ್ಕಿದೆ. ರಾಜ್ಯದ ಪ್ರಮುಖ ಮಠದ ಸ್ವಾಮೀಜಿಗಳು ಅಭಯ ಹಸ್ತ ನೀಡಿದ್ದಾರೆ. ರೆಡ್ಡಿ ಬಣಕ್ಕೆ ಮಾತೆ ಸುಷ್ಮಾ ಸ್ವರಾಜ್ ಜೊತೆಗೆ ಹಿರಿ ತಲೆ ಎಲ್ ಕೆ ಅಡ್ವಾಣಿ ಸೇರುವ ಸಾಧ್ಯತೆಯಿದೆ. ಜೊತೆಗೆ ಆರೆಸ್ಸೆಸ್ ನ ನಾಯಕರ ಮನವೊಲಿಕೆ ಪ್ರಯತ್ನ ಕೂಡಾ ನಡೆದಿದೆ.
ಆದರೆ, ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಎಲ್ಲರ ಭಿನ್ನರಾಗ ಹಾಡುತ್ತಿರುವ ಶಾಸಕರನ್ನು ತಮ್ಮ ತಾಳಕ್ಕೆ ಕುಣಿಯುವಂತೆ ಮಾಡುವೆ ಎಂದು ಇಲ್ಲದ ಮೀಸೆಯನ್ನು ಯಡಿಯೂರಪ್ಪ ನೀವುತ್ತಿದ್ದರಂತೆ. ಯಾವುದಕ್ಕೂ ವಾರಾಂತ್ಯಕ್ಕೆ ಬಿಜೆಪಿ ವಕ್ತಾರ ಪ್ರತಾಪ್ ಸಿಂಗ್ ರೂಡಿ ದೆಹಲಿಯಿಂದ ತರುವ ಸಂದೇಶದ ಮೇಲೆ ಎಲ್ಲವೂ ನಿಂತಿದೆ.












Click it and Unblock the Notifications