ಹೋಳಿ ದಿನ ಚುನಾವಣಾ ಕಣ ರಂಗೇರಿಸಿದ ಎಚ್ಡಿಕೆ

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಪ್ರಚಾರಕ್ಕೆ ಬರದಿದ್ದರೂ ಪರವಾಗಿಲ್ಲ ನಿಮ್ಮನ್ನು ಗೆಲ್ಲುವ ಭಾರ ನಮ್ಮದು ಎಂದು ಇಲ್ಲಿನ ಜನತೆ ಹೇಳುತ್ತಿದ್ದಾರೆ. ಅವರ ಅಭಿಮಾನಿಕ್ಕೆ ಕುಮಾರಸ್ವಾಮಿ ಮಣಿದಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಅಪರೇಷನ್ ಕಮಲ ಮೂಲಕ ರಾಜಕೀಯವನ್ನು ಹಾಳು ಮಾಡಿರುವ ಬಿಜೆಪಿಗೆ ತಕ್ಕಪಾಠ ಕಲಿಸಬೇಕಿದೆ. ತಾವು ಕ್ಷೇತ್ರದ ಜನತೆಯ ಮನವಿಯನ್ನು ದೇವೇಗೌಡರಿಗೆ ಸಲ್ಲಿಸಿ, ಒಪ್ಪಿಗೆ ಪಡೆಯುತ್ತೇನೆ. ಬಹುಶಃ ಬುಧವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ಪಕ್ಷದ ಕಾರ್ಯಕರ್ತ ಸಭೆಯಲ್ಲಿ ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಹೊರ ಹಾಕಿದೆ. ಅದರೆ, ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಿಂದ ರಘುನಂದನ್ ರಾಮಣ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಕುಮಾರಣ್ಣನ ವಿರುದ್ಧ ನಾನು ಸ್ಪರ್ಧಿಸಲಾರೆ. ಮಂತ್ರಿಗಿರಿನೂ ಬೇಡ ಏನೂ ಬೇಡ ಹೈಕಮಾಂಡ್ ಒತ್ತಡಕ್ಕೆ ಮಣಿಯಲಾರೆ ಎಂದು ಮಾಜಿ ಶಾಸಕ ಕಮ್ ನಟ ಸಿಪಿ ಯೋಗೀಶ್ವರ ಥಕ ಥೈ ಎಂದು ಕುಣಿಯುತ್ತಿದ್ದಾರೆ. ಹಾಗಾಗಿ ನಾಮಪತ್ರ ಸಲ್ಲಿಕೆಯಾಗುವ ತನಕ ಕುಮಾರಸ್ವಾಮಿ ಸ್ಪರ್ಧಿಗಳು ಯಾರು ಎಂಬುದನ್ನು ಸ್ಪಷ್ಟಪಡಿಸಲು ಖಂಡಿತ ಸಾಧ್ಯವಿಲ್ಲ.
ಇತ್ತ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ, ಬಂಗಾರಪೇಟೆ, ಜಗಳೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಬಾಕಿಯಿದೆ. ಕೊನೆ ಸಮಯದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ತೊಡಗಿದ್ದು, ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ. ಮೇ 13 ರಂದು ಜನಪ್ರತಿನಿಧಿಗಳ ಭವಿಷ್ಯ ಪ್ರಕಟವಾಗಲಿದೆ.












Click it and Unblock the Notifications