ನಾ ನೋಡಿ ನಲಿವಾ ಕಾರವಾರ...ಹೊಸ ರೈಲು ಹಾಡು

ಇತ್ತೀಚೆಗಷ್ಟೇ ಹಳಿಗೆ ಬಂದಿದ್ದ ಮಂಗಳೂರು ಹಗಲು ರೈಲು, ಇನ್ನು ಮುಂದೆ ಪ್ರಯಾಣಿಕರನ್ನು ಕಾರವಾರದವರೆಗೂ ಕರೆದೊಯ್ಯುವ ಸಿಹಿ ಸುದ್ದಿಯನ್ನು ರೈಲ್ವೆ ಸಚಿಬೆ ಮಮತಾ ಬ್ಯಾನರ್ಜಿ ಮೊನ್ನೆ ರೈಲ್ವೆ ಮುಂಗಡಪತ್ರದಲ್ಲಿ ಪ್ರಕಟಿಸಿದ್ದಾರೆ. ಕಾರವಾರ ರೈಲು ಮಧ್ಯೆ ಮಧ್ಯೆ ತೀರ್ಥಯಾತ್ರೆಯನ್ನೂ ಮಾಡಿಸುತ್ತದೆ. ಖ್ಯಾತ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಇದೇ ರೈಲಿನಲ್ಲಿ ನೇರವಾಗಿ ತೆರಳಬಹುದು. ಮತ್ತೊಂದು ಪುರಾಣ ಪ್ರಸಿದ್ಧ ಕೇಂದ್ರವಾದ ಉಡುಪಿಗೆ ಈ ಟ್ರೈನಿನಲ್ಲಿ ಸಲೀಸಾಗಿ ತೆರಳಬಹುದು.
ಹೀಗೆಯೇ, ಇನ್ನೂ ಅನೇಕ ಧಾರ್ಮಿಕ ಕೇಂದ್ರಗಳ ದರುಶನ ಭಾಗ್ಯ ನಿಮ್ಮದಾಗಿಸಿಕೊಳ್ಳಬಹುದು. ಹಟ್ಟಿನಂಗಡಿ ಆನೆಗುಡ್ಡೆ, ಇಡುಗುಂಜಿ, ಗೋಕರ್ಣ ಒಂದೇ ಎರಡೇ... ಸೌಪರ್ಣಿಕಾ ನದಿಯ ಸಿಹಿ ನೀರ ಸಿಂಚನವೂ ಆಗಲಿದೆ. ಮರವಂತೆ... ಹೆಸರೇ ರೋಮಾಂಚನ. ಇಲ್ಲಿ ಅರಬ್ಬಿ ಸಮುದ್ರವನ್ನು ಸೀಳಿಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಕಾರವಾರ ರೈಲಿನ ಪ್ರಯಾಣ ಸಾಗುತ್ತದೆ!
ಮುಂದ, ರೈಲಿನಲ್ಲಿ ಸಾಗುತ್ತಲೇ ಶಿರಾಡಿಘಾಟ್ನ ರಮಣೀಯ ದೃಶ್ಯಗಳನ್ನು ಆಸ್ವಾದಿಸಬಹುದು. ಇನ್ನೂ ಮುಂದಕ್ಕೆ ಕರಾವಳಿ ನೋಟ ತನ್ನಷ್ಟಕ್ಕೇ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ಕಣ್ತುಂಬಿಸಿಕೊಳ್ಳಲು ನೀವು ಸಜ್ಜಾಗಿರಬೇಕು ಅಷ್ಟೆ. ಮಂಗಳೂರು ಹಗಲು ರೈಲು ಎಂದೇ ಇಷ್ಟು ದಿನ ಚಾಲ್ತಿಯಲ್ಲಿದ್ದ Yeshwantpur-Mangalore Express ಇನ್ನು ಮುಂದೆ ಕಾರವಾರ ರೈಲು ಎಂದು ಪ್ರಯಾಣಿಕರ ಬಾಯಲ್ಲಿ ನಲಿದಾಡಲಿದೆ! ದುಃಸ್ವಪ್ನದಂತೆ ಕಾಡುತ್ತಿದ್ದ ಕೆಟ್ಟ ರಸ್ತೆ ಸಂಚಾರದಿಂದ ಜನಕ್ಕೆ ಮುಕ್ತಿ ದೊಕಲಿದೆ. ಪ್ರವಾಸಿಗರಿಗೆ ಸುಗ್ಗಿಯೂ ಸುಗ್ಗಿ! ನಾ ನೋಡಿ ನಲಿವಾ ಕಾರವಾರ ...ಗೀತೆ ಗುಯ್ಯುಗುಡುತ್ತಿದಯೇ? ತಡವೇಕೆ, ಕಾರವಾರ ರೈಲು ಹತ್ತಲು ಈಗಲೇ ಬುಕ್ಕಿಂಗ್ ಮಾಡಿಸಿ!











Click it and Unblock the Notifications