ಹಾಲಪ್ಪ ರೇಪ್ ಪ್ರಕರಣ ಸಿಬಿಐ ತನಿಖೆಗೆ?

ನಿಷ್ಪಕ್ಷಪಾತವಾದ ತನಿಖೆಯನ್ನು ಸಿಐಡಿಯಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಚಂದ್ರಾವತಿ ವೆಂಕಟೇಶ್ ಮೂರ್ತಿ ದಂಪತಿಗಳು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ನಂತರ ಈ ಬಗ್ಗೆ ಹೈಕೋರ್ಟ್ ಗೆ ಅರ್ಜಿ ಹಾಕಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಂತೆ ಮನವಿ ಮಾಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಲಾಗಿದೆ.
ಕೇಸ್ ಹಿಸ್ಟರಿ: ವೆಂಕಟೇಶಮೂರ್ತಿ ಮತ್ತು ಚಂದ್ರಾವತಿ ದಂಪತಿಗಳ ಮನೆಗೆ ಭೋಜನಕ್ಕಾಗಿ ಬಂದಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ನಡುರಾತ್ರಿಯಲ್ಲಿ ವೆಂಕಟೇಶಮೂರ್ತಿ ಅವರನ್ನು ಮಾತ್ರೆ ತರಲು ಗೆಸ್ಟ್ ಹೌಸ್ ಗೆ ಕಳಿಸಿ ಅವರ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದರು ಎನ್ನುವುದು ಹಾಲಪ್ಪ ಅವರ ಮೇಲಿರುವ ಗಂಭೀರ ಆರೋಪ. ಇದೇ ಕಾರಣ ಅವರು ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡಿದ್ದರು.
ನಂತರ ಹಲವು ವಲಯಗಳಿಂದ ತೀವ್ರ ಒತ್ತಡ ಬಂದ ನಂತರ ಮುಖ್ಯಮಂತ್ರಿ ಯಡಿಯೂರಪ್ಪಅವರು ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರು. ಇತ್ತ ಹಾಲಪ್ಪ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಜಂಪ್ ಮಾಡುತ್ತಾ ಜೈಲುವಾಸ ತಪ್ಪಿಸಿಕೊಂಡು ಹೈಕೋರ್ಟ್ ನಿಂದ ಜಾಮೀನು ಪಡೆದು ಊರು ಸೇರಿದ್ದರು.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮಾಜಿ ಕಾರ್ಯದರ್ಶಿ ಹುಲ್ತಿಕೊಪ್ಪ ಶ್ರೀಧರ್ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಅದು ಬಿಟ್ಟರೆ ಸಿಐಡಿಯಿಂದಾಗಲಿ, ಹಾಲಪ್ಪ ಹಾಗೂ ಅವರ ಬೆಂಬಲಿಗರ ಕಡೆಯಿಂದ ಯಾವುದೇ ಬಿಸಿ ಬಿಸಿ ಸುದ್ದಿ ಹೊರಬಂದಿರಲಿಲ್ಲ.












Click it and Unblock the Notifications